ಗುತ್ತಿಗೆದಾರರ ಸಮಸ್ಯೆಗಳ ಕುರಿತು ಒಂಟಿ ಹೋರಾಟ ನಡೆಸುತ್ತಿದ್ದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ತಮ್ಮ ಬೆಂಬಲಕ್ಕೆ ಯಾರೂ ಬಾರದ ಕಾರಣ ಮುನಿಸಿಕೊಂಡಿದ್ದು, ಗುತ್ತಿಗೆದಾರರ ಸಂಘದ ಮೊದಲ ಸಭೆಯಲ್ಲಿ ಆ ಮುನಿಸು ಮರೆತು ಮಾತನಾಡಿದರು. `ಗುತ್ತಿಗೆದಾರರೆಲ್ಲರೂ ಒಗ್ಗಟ್ಟಿನಿಂದ ಇದ್ದರೆ ಮಾತ್ರ ಬದುಕು ಸಾಧ್ಯ’ ಎಂದು ಅವರು ಸಭೆಯಲ್ಲಿದ್ದವರಿಗೆ ಮನವರಿಕೆ ಮಾಡಿದರು.
ಕರ್ನಾಟಕ ರಾಜ್ಯ ಸಿವಿಲ್ ಗುತ್ತಿಗೆದಾರರ ಸಂಘದ ಮೊದಲ ಸಭೆ ಬೆಂಗಳೂರಿನಲ್ಲಿ ನಡೆಯಿತು. ಕಾರವಾರ ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ `ಗುತ್ತಿಗೆದಾರರೆಲ್ಲರೂ ಪಕ್ಷ- ಭೇದ ಮರೆತು ಒಂದಾಗಬೇಕು’ ಎಂದು ಕರೆ ನೀಡಿದರು. `ಹೋರಾಟದ ಮುಂಚೂಣಿಯಲ್ಲಿದ್ದವರಿಗೆ ಎಷ್ಟೊಂದು ಸಮಸ್ಯೆಗಳು ಬರುತ್ತವೆ ಎನ್ನುವುದಕ್ಕೆ ನಾನೇ ಸಾಕ್ಷಿ’ ಎಂದು ಉದಾಹರಣೆಗಳೊಂದಿಗೆ ವಿವರಿಸಿದರು.
`ಗುತ್ತಿಗೆದಾರರಿಗೆ ಸರ್ಕಾರದ ಬಾಕಿ ಪಾವತಿಯಾಗುತ್ತಿಲ್ಲ. ಗುತ್ತಿಗೆದಾರರು ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಶೇ 40ರ ಕಮಿಶನ್ ವಿರುದ್ಧ ಹೋರಾಡಿದ ಕಾರಣ ಕೋರ್ಟು-ಕಚೇರಿ ಅಲೆದಾಡುವ ಹಾಗಾಗಿದ್ದು, ನನ್ನ ವಿರುದ್ಧ 10 ಕೋಟಿಯ ಮಾನಹಾನಿ ಪ್ರಕರಣ ದಾಖಲಿಸಲಾಗಿದೆ. ಕಾಮಗಾರಿ ಬಿಲ್ ಪಾವತಿಯಾಗದ ಬಗ್ಗೆ ಧ್ವನಿ ಎತ್ತಿದರೂ ಅದನ್ನು ದಮನಿಸುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ಬೇಸರದಿಂದ ಮಾತನಾಡಿದರು. ಮಾಧವ ನಾಯಕರ ಧ್ವನಿ ಆಲಿಸಿದ ಇನ್ನಿತರ ಗುತ್ತಿಗೆದಾರರು `ಮಾನನಷ್ಟ ಮೊಕದ್ದಮೆ ಹಿಂಪಡೆಯಲು ಒತ್ತಾಯಿಸೋಣ’ ಎಂಬ ಭರವಸೆ ನೀಡಿದರು. ಆದರೆ, ಅದನ್ನು ತಿರಸ್ಕರಿಸಿದ ಮಾಧವ ನಾಯಕರು `ನಾನು ಆಡಿದ ಪ್ರತಿ ಮಾತಿಗೂ ದಾಖಲೆಯಿದೆ. ಕಾನೂನು ಹೋರಾಟದ ಮೂಲಕವೇ ಅದನ್ನು ಬಗೆಹರಿಸುವೆ’ ಎಂದು ಸ್ಪಷ್ಠಪಡಿಸಿದರು.
`ಎಲ್ಲಡೆ ಭ್ರಷ್ಟಾಚಾರ ಮಿತಿ ಮೀರಿದೆ. ಕಾಮಗಾರಿ ಮಂಜೂರಿ ಮಾಡಿಸಿಕೊಂಡು ಬರಲು ಅಧಿಕಾರಿ-ಶಾಸಕರಿಗೆ ಹಣ ಕೊಡಬೇಕಾಗಿದೆ. ಕೆಆರ್ಐಡಿಎಲ್, ನಿರ್ಮಿತಿಯಿಂದ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಎಲ್ಲರೂ ಒಗ್ಗಟ್ಟಿನಿಂದ ಹೋರಾಟಬೇಕು. ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಸಭೆ ಆಯೋಜಿಸಬೇಕು’ ಎಂದು ಅವರು ಆಗ್ರಹಿಸಿದರು. ಈ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳುವುದಾಗಿ ಸಂಘದ ಪದಾಧಿಕಾರಿಗಳು ಸಭೆಗೆ ತಿಳಿಸಿದರು.
ದೆಹಲಿಗೆ ತೆರಳಲಿದೆ ನಿಯೋಗ
ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್ ಮಂಜುನಾಥ, ಉಪಾಧ್ಯಕ್ಷ ಎನ್ ಮಂಜುನಾಥ, ಗೌರವಾಧ್ಯಕ್ಷ ಜಗನ್ನಾಥ್ ಶೇಗಜಿ ಅವರು ಜಿಎಸ್ಟಿ ವಿಚಾರಕ್ಕೆ ಸಂಬAಧಿಸಿ ಮಾತನಾಡಲು ದೆಹಲಿಗೆ ಹೋಗುತ್ತಿದ್ದಾರೆ. ಜಿಎಸ್ಟಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದು, ಜಿಎಸ್ಟಿ ಪಾವತಿಗೆ ಮಾರ್ಚ್ 31ರವರೆಗಿರುವ ನಿರ್ಧರಿತ ದಿನವನ್ನು ಡಿಸೆಂಬರ್ವರೆಗೆ ವಿಸ್ತರಿಸಿ ಕಾಲಾವಕಾಶ ನೀಡಬೇಕು ಎಂದು ಕೋರಲಿದ್ದಾರೆ.