ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಿಬ್ಬಂದಿ ಸುಮಾ ಮಡಿವಾಳ ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಪ್ರಶಾಂತ ಮಡಿವಾಳ ಅವರು ಬೈಕ್ ಓಡಿಸುತ್ತಿದ್ದಾಗ ನಾಯಿ ಅಡ್ಡ ಬಂದಿದ್ದರಿoದ ಈ ಅವಘಡ ನಡೆದಿದೆ.
ಕುಮಟಾ ತಾಲೂಕಿನ ಗುಡೇಅಂಗಡಿಯ ಸುಮಾ ಮಡಿವಾಳ (32) ಅವರು ಕುಮಟಾದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕುಮಟಾ ಕಚೇರಿಯಲ್ಲಿ ಉದ್ಯೋಗಕ್ಕಿದ್ದರು. ಭಾನುವಾರ ಬೆಳಗ್ಗೆ 9.20ಕ್ಕೆ ಅವರು ಸೈಕಲ್ ರಿಪೇರಿ ಮಾಡುವ ಪ್ರಶಾಂತ ಮಡಿವಾಳ ಅವರ ಬೈಕು ಏರಿ ಹೊಲನಗದ್ದೆಯಿಂದ ಕುಮಟಾ ಕಡೆ ಹೊರಟಿದ್ದರು. ನಾಗಶ್ರೀ ವಾಟರ್ ಸರ್ವಿಸ್ ಸೆಂಟರ್ ಬಳಿ ಏಕಾಏಕಿ ನಾಯಿ ಅಡ್ಡ ಬಂದಿದ್ದರಿoದ ಪ್ರಶಾಂತ ಮಡಿವಾಳ ಬೈಕ್ ನಿಲ್ಲಿಸುವ ಪ್ರಯತ್ನ ಮಾಡಿದರು.
ಈ ವೇಳೆ ಹಿಂದೆ ಕೂತಿದ್ದ ಸುಮಾ ಮಡಿವಾಳ ಆಯತಪ್ಪಿ ನೆಲಕ್ಕೆ ಬಿದ್ದರು. ಅವರ ಮೂಗಿನಿಂದ ರಕ್ತ ಬರಲು ಶುರುವಾಯಿತು. ತಲೆ ಹಾಗೂ ಹಣೆಗೂ ಭಾರೀ ಪ್ರಮಾಣದ ಪೆಟ್ಟಾಗಿತ್ತು. ಆಂಬುಲೆನ್ಸ ಮೂಲಕ ಸುಮಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆಯಿತು. ಆದರೆ, ಮೂರಾಕಟ್ಟಾ ಬಳಿ ಅವರು ಸಾವನಪ್ಪಿದರು.
ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುವ 72 ವರ್ಷದ ಮಹಾದೇವ ಮಡಿವಾಳ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಬೈಕ್ ಸವಾರ ಪ್ರಶಾಂತ ಮಡಿವಾಳ ವಿರುದ್ಧ ಪ್ರಕರಣ ದಾಖಲಾಗಿದೆ. ಪಿಎಸ್ಐ ರವಿ ಗುಡ್ಡಿ ತನಿಖೆ ನಡೆಸುತ್ತಿದ್ದಾರೆ.