`ಮುಂದಿನಿoದ ಎಲ್ಲರೂ ಅಕ್ಕ.. ಅಕ್ಕ.. ಎನ್ನುತ್ತ ಪ್ರೀತಿಯಿಂದ ಮಾತನಾಡುತ್ತಾರೆ. ಆದರೆ, ಬೆನ್ನ ಹಿಂದೆ ನನ್ನ ವಿರುದ್ಧ ಕುತಂತ್ರ ಮಾಡುತ್ತಾರೆ’ ಎಂದು ಯಲ್ಲಾಪುರ ಪ ಪಂ ಸದಸ್ಯೆ ಪುಷ್ಪಾ ನಾಯ್ಕ ಸಾಮಾನ್ಯ ಸಭೆಯಲ್ಲಿ ಕಣ್ಣೀರಾದರು.
ಶುಕ್ರವಾರ ನಡೆದ ಸಭೆಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮುಂದೆ ಪುಷ್ಪಾ ನಾಯ್ಕ ಬಹಿರಂಗವಾಗಿ ತಮ್ಮ ನೋವು ತೋಡಿಕೊಂಡರು. `ಕಳೆದ 20 ವರ್ಷಗಳಿಂದ ನಾನು ರಾಜಕಾರಣದಲ್ಲಿದ್ದೇನೆ. ಹಣ ಪಡೆದು ಕೆಲಸ ಮಾಡುವ ಹಾಗಿದಿದ್ದರೆ ಈಗಲೂ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರಲಿಲ್ಲ. ಜನರ ಒಳಿತಿಗಾಗಿ ಅಭಿವೃದ್ಧಿ ಅನುದಾನ ನೀಡಿದರೆ ಕಮಿಶನ್ ಪಡೆದು ಕೆಲಸ ಮಾಡಿದ್ದಾರೆ ಎಂದು ನಮ್ಮವರೇ ಊಹಾಪೋಹ ಹಬ್ಬಿಸುತ್ತಾರೆ’ ಎಂದು ಅಳಲು ತೋಡಿಕೊಂಡರು.
`ಮತದಾರರ ಮನವಿ ಮೇರೆಗೆ ಸವಣಗೇರಿ ಬಳಿ ರಸ್ತೆ ಅಭಿವೃದ್ಧಿಗೆ 2.5 ಲಕ್ಷ ರೂ ಮಂಜೂರಿ ಮಾಡಲಾಗಿತ್ತು. ಮಂಜೂರಿ ಮಾಡುವ ವೇಳೆ ಯಾರೂ ಇದಕ್ಕೆ ತಕರಾರು ಸಲ್ಲಿಸಲಿಲ್ಲ. ಗುತ್ತಿಗೆದಾರ ಕೆಲಸ ಶುರು ಮಾಡಿದ ನಂತರ ಮುಖ್ಯಮಂತ್ರಿ ಕಚೇರಿಯವರೆಗೆ ದೂರು ಸಲ್ಲಿಸಿ ಸಮಸ್ಯೆ ಮಾಡಲಾಗಿದೆ. ಅಕ್ಕ.. ಅಕ್ಕ ಎಂದು ಕರೆಯುವ ಈ ಜನ ಅಲ್ಲಿ ಹಣ ಮಂಜೂರಿ ಮಾಡುವುದು ಕಾನೂನುಬಾಹಿರ ಎಂದು ಮುಂಚಿತವಾಗಿ ಒಂದು ಮಾತು ತಿಳಿಸಲಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು.
`ತಕರಾರು ಸಲ್ಲಿಸುವ ಮೊದಲು ಭೂ ಪರಿವರ್ತನೆ ಆಗದ ಕ್ಷೇತ್ರಕ್ಕೆ ಹಣ ಮಂಜೂರಿ ಮಾಡಬೇಡಿ ಎಂದು ಒಂದು ಮಾತು ಹೇಳಬೇಕಿತ್ತು. ಎದುರಿನಿಂದ ಚನ್ನಾಗಿ ಮಾತನಾಡುವವರು ತೆರೆಮರೆಯಲ್ಲಿ ನಿಂತು ಕೊಂಕು ಮಾಡುವುದನ್ನು ಬಿಡಬೇಕು’ ಎಂದು ಯಾರ ಹೆಸರನ್ನು ತೆಗೆದುಕೊಳ್ಳದೇ ಕಿವಿಮಾತು ಹೇಳಿದರು.
ಇದನ್ನು ಓದಿ: ಪುಷ್ಪಾ ನಾಯ್ಕರ ಬೇಸರಕ್ಕೆ ಕಾರಣವೇನು? ಅರೆಬರೆ ಕೆಲಸದ ಅದ್ವಾನ: ಸರ್ಕಾರಿ ಕೆಲಸಕ್ಕೆ ಖಾಸಗಿ ಅನುದಾನ!
`ಸವಣಗೇರಿ ರಸ್ತೆ ಅಭಿವೃದ್ಧಿಗೆ ಹಣ ಮಂಜೂರಿ ಮಾಡಿದ್ದರಿಂದ ಪ ಪಂ ಅಧಿಕಾರಿಗಳಿಗೆ ಸಹ ತೊಂದರೆಯಾಗಿದೆ. ಕೆಲವರು ಸಾವಿರ ಜನರನ್ನು ಕರೆಯಿಸಿ ಪ್ರತಿಭಟನೆ ನಡೆಸುವುದಾಗಿ ಅಧಿಕಾರಿಗಳನ್ನು ಬೆದರಿಸುತ್ತಿದ್ದಾರೆ. ಯಾರಿಗೂ ತೊಂದರೆ ಮಾಡುವ ಉದ್ದೇಶವಿಲ್ಲದ ಕಾರಣ ಆ ಹಣವನ್ನು ಬದಲಿ ಕಾಮಗಾರಿಗೆ ಬಳಸುವಂತೆ ಪತ್ರ ಕೊಡುವೆ’ ಎಂದು ಸಭೆಯಲ್ಲಿ ಅವರು ಸ್ಪಷ್ಠಪಡಿಸಿದರು. ಪುಷ್ಪಾ ನಾಯ್ಕ ಅವರ ಈ ನಿರ್ಣಯವನ್ನು ಅನೇಕರು ಚಪ್ಪಾಳೆ ಮೂಲಕ ಸ್ವಾಗತಿಸಿದರು.