ರಟ್ಟಿಹಳ್ಳಿ: ರಟ್ಟಿಹಳ್ಳಿ ಪಟ್ಟಣ ಪಂಚಾಯತ್ ಕಾರ್ಯಾಲಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ರುದ್ರಪ್ಪ ಲಮಾಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ರುದ್ರಪ್ಪ ಲಮಾಣಿ, ಪಟ್ಟಣ ಪಂಚಾಯತ್ ವತಿಯಿಂದ ಪೌರ ಸನ್ಮಾನ ಸ್ವೀಕರಿಸಿರುವುದು ಅಭಿಮಾನ ಮೂಡಿಸಿದೆ. ಇದು ತಮ್ಮ ಸುದೈವ ಎಂದು ಹೇಳಿದರು.
ರಟ್ಟಿಹಳ್ಳಿ ತಾಲೂಕು ರಚನೆಯಾದ ಸಂದರ್ಭದಲ್ಲಿ ನಾನೇ ಉಸ್ತುವಾರಿ ಸಚಿವನಾಗಿದ್ದೆ. ಇದೀಗ ಮತ್ತೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ರಟ್ಟಿಹಳ್ಳಿಗೆ ಬಂದಿರುವುದು ಸಂತಸ ತಂದಿದೆ. ಈಗ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ಪಟ್ಟಣ ಪಂಚಾಯತ್ ವತಿಯಿಂದ ಒಪ್ಪಿಸಿರುವ ಆರು ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು. ತಮ್ಮ ಅಧಿಕಾರಾವಧಿಯಲ್ಲಿಯೇ ಬೇಡಿಕೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಪಟ್ಟಣ ಪಂಚಾಯತ್ ಸಿಬ್ಬಂದಿ ನೇಮಕ ಕಾಯಂಗೊಳಿಸುವ ಭರವಸೆ
ಶಾಸಕರಾದ ಯು.ಬಿ. ಬಣಕಾರ ಮಾತನಾಡಿ, ಭವಿಷ್ಯದ ದಿನಗಳಲ್ಲಿ ಶಾಸಕರಿಗೆ ಹೆಚ್ಚಿನ ಅನುದಾನ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು.
ರಟ್ಟಿಹಳ್ಳಿ ಪಟ್ಟಣ ಪಂಚಾಯತ್ನ 23 ಸಿಬ್ಬಂದಿಗಳ ನೇಮಕವನ್ನು ಕಾಯಂಗೊಳಿಸಲಾಗುವುದು. ರಟ್ಟಿಹಳ್ಳಿ ಪಟ್ಟಣದ ಅಭಿವೃದ್ಧಿಗೆ ಅಗತ್ಯವಿರುವ ಕೆಲಸಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ರುದ್ರಪ್ಪ ಲಮಾಣಿ ಅವರು ಕೂಡ ನಮ್ಮೊಂದಿಗೆ ಕೈಜೋಡಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರವೀಂದ್ರ ಮುದಿಯಪ್ಪನವರ, ಬಸವರಾಜ ಆಡಿನ, ಶಿವಕುಮಾರ ಉಪ್ಪಾರ, ಪಿ.ಡಿ. ಬಸನಗೌಡ್ರ, ಬಸವರಾಜ ಕಟ್ಟಿಮನಿ, ಮಕ್ಬೂಲ್ ಸಾಬ ಮುಲ್ಲಾ, ಸರ್ಫರಾಜ್ ಮಾಸೂರ, ಮಂಜಮ್ಮ ಅಗಡಿ, ಲಕ್ಷ್ಮೀ, ವೀರನಗೌಡ ಪ್ಯಾಟಿಗೌಡ್ರ, ಉಳಿವೆಪ್ಪ ಸಾಲಿ, ಜಬಿವುಲ್ಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.




