ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಯಿ-ಕುದುರೆಗಳ ಹೆಸರಿನಲ್ಲಿಯೂ ಸ್ಮಾರಕವಿದ್ದು, ಅದರಿಂದ ಸಾರ್ವಜನಿಕರಿಗೆ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಐತಿಹಾಸಿಕ ಮಹತ್ವ ಇಲ್ಲದ ಈ ಸ್ಮಾರಕಗಳಿಂದ ಅನಗತ್ಯ ತೊಂದರೆ ಅನುಭವಿಸಿದವರ ಸಂಖ್ಯೆ ಹೆಚ್ಚಿರುವ ಹಿನ್ನಲೆ ಈ ಸ್ಮಾರಕಗಳಿಂದ ಸ್ವಾತಂತ್ರ್ಯ ಕೊಡಿಸುವಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಆಗ್ರಹಿಸಿದರು.
`ನಾಯಿ-ಕುದುರೆಗೂ ಇಲ್ಲಿದೆ ಸ್ಮಾರಕ’ ಎಂಬ ಶೀರ್ಷಿಕೆಯ ಅಡಿ ಜುಲೈ 27ರಂದು S News ಡಿಜಿಟಲ್ ವರದಿ ಪ್ರಸಾರ ಮಾಡಿತ್ತು. ಈ ಸ್ಮಾರಕದಿಂದ ಜನ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಹ ಐತಿಹಾಸಿಕ ಮಹತ್ವ ಇಲ್ಲದ ಕಾರಣ ಸ್ಮಾರಕಗಳ ಪಟ್ಟಿಯಿಂದ ಅವನ್ನು ಹೊರಗಿಡಿಸುವ ಬಗ್ಗೆ ಭರವಸೆ ನೀಡಿದ್ದರು. ಇದೀಗ ಅವರು ಅದರ ಪ್ರಯತ್ನವಾಗಿ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಿದ್ದಾರೆ.
ಇದನ್ನೂ ಓದಿ: ನಾಯಿ-ಕುದುರೆ ಹೆಸರಿಗೂ ಸ್ಮಾರಕ!
ಸ್ಮಾರಕ ಎಂದು ಘೋಷಣೆ ಆಗಿರುವ ಕಾರಣ ಸುತ್ತಲಿನ ಪ್ರದೇಶ ಅಭಿವೃದ್ಧಿಗೆ ತೊಂದರೆಗಳಿದ್ದವು. ಕುಮಟಾದ ಮಣಕಿ ಮೈದಾನದ ಎದುರಿಗಿರುವ ಸಮಾಧಿ, ಸಿದ್ದಾಪುರದ ಹೊದೂರು ಮತ್ತು ಬೇಡ್ಕಣಿಯಲ್ಲಿರುವ ಮೂರು ಸ್ಥಳಗಳು ಹಾಗೂ ಭಟ್ಕಳದಲ್ಲಿರುವ ನಾಯಿ ಸ್ಮಾರಕ ಜನರ ಸಮಸ್ಯೆಗೆ ಕಾರಣವಾಗಿತ್ತು. ಈ ಹಿನ್ನಲೆ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಂದ್ರ ಸಚಿವರಿಗೆ ಈ ವಿಷಯ ಮುಟ್ಟಿಸಿದ್ದಾರೆ. ಐತಿಹಾಸಿಕ ಮಹತ್ವವಿಲ್ಲದ ಸ್ಥಳಗಳನ್ನು ನಿಷೇಧಿತ ಪ್ರದೇಶದಿಂದ ಕೈ ಬಿಡುವ ಬಗ್ಗೆ ಭರವಸೆ ಸಿಕ್ಕಿದೆ.




