ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಯಲ್ಲಾಪುರ ತಾಲೂಕಿನ ಮಂಚಿಕೇರಿ ಸಮೀಪದ ಬಾಳೆಗದ್ದೆ ಬಳಿ ನಡೆದಿದೆ.
ಮೈಸೂರಿನಿಂದ ದಾಂಡೇಲಿಗೆ ಹೊರಟಿದ್ದ ಬಸ್ ಮಂಚಿಕೇರಿ ಬಳಿಯ ಬಾಳೆಗದ್ದೆ ಕ್ರಾಸ್ ಬಳಿ ಮರಕ್ಕೆ ಡಿಕ್ಕಿ ಹೊಡೆದಿದೆ. ನಂತರ ಸ್ವಲ್ಪ ಹಿಂದಕ್ಕೆ ಬಂದು ಗಟಾರದಲ್ಲಿ ಪಲ್ಟಿಯಾಗಿದೆ. ಬಸ್ ನ ಮುಂಭಾಗ ಜಖಂಗೊಂಡಿದೆ.
ಬಸ್ ನಲ್ಲಿ 30 ಜನ ಪ್ರಯಾಣಿಕರಿದ್ದು, ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.




