ಖ್ಯಾತ ಚಲನಚಿತ್ರ ನಿರ್ದೇಶಕ ಇಮ್ತಿಯಾಜ್ ಅಲಿ ತಮ್ಮ ಹೊಸ ಸಿನಿಮಾ ‘ಮೇನ್ ವಾಪಸ್ ಆವುಂಗಾ’ ಯಶಸ್ಸಿನ ಸಂಭ್ರಮಾಚರಣೆಯ ಭಾಗವಾಗಿ ಶುಕ್ರವಾರ ಬೆಂಗಳೂರಿಗೆ ಭೇಟಿ ನೀಡಿದ್ದರು. ಈ ವೇಳೆ ಸಿಲಿಕಾನ್ ಸಿಟಿಯ ಜನತೆ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದ್ದಾರೆ.
ತಮ್ಮ ನೆಚ್ಚಿನ ನಿರ್ದೇಶಕನನ್ನು ಕಣ್ಣುಂಬಿಕೊಳ್ಳಲು ಕೋರಮಂಗಲದ ನೆಕ್ಸಸ್ ಮಾಲ್, ಬನ್ನೇರುಘಟ್ಟ ರಸ್ತೆಯ ಪಿವಿಆರ್ ವೇಗಾ ಸಿಟಿ, ಪಿವಿಆರ್ ವಿಆರ್ ಬೆಂಗಳೂರು ಮತ್ತು ಪಿವಿಆರ್ ಫೀನಿಕ್ಸ್ ಮಾರ್ಕೆಟ್ಸಿಟಿಗೆ ಅಭಿಮಾನಿಗಳು ಸಾಗರೋಪಾದಿಯಲ್ಲಿ ಹರಿದು ಬಂದಿದ್ದರು. ಚಿತ್ರಮಂದಿರಗಳ ತುಂಬೆಲ್ಲಾ ಹರ್ಷೋದ್ಗಾರ, ಕಿಕ್ಕಿರಿದು ತುಂಬಿದ್ದ ಜನಸಂದಣಿ, ಸೆಲ್ಫಿಗಳ ಅಬ್ಬರ ಮತ್ತು ಇಮ್ತಿಯಾಜ್ ಅಲಿ ಅವರೊಂದಿಗೆ ಅಭಿಮಾನಿಗಳು ನಡೆಸಿದ ಆತ್ಮೀಯ ಸಂವಾದಗಳು ಬೆಂಗಳೂರಿಗರಿಗೆ ಸಿನಿಮಾ ಮೇಲಿರುವ ಪ್ರೀತಿಯನ್ನು ಸಾಬೀತುಪಡಿಸಿದವು.
ಚಿತ್ರಮಂದಿರಗಳಿಗೆ ಭೇಟಿ ನೀಡಿದ ಇಮ್ತಿಯಾಜ್ ಅಲಿ, ಪ್ರೇಕ್ಷಕರೊಂದಿಗೆ ನೇರವಾಗಿ ಸಂವಾದ ನಡೆಸಿ, ‘ಮೇನ್ ವಾಪಸ್ ಆವುಂಗಾ’ ಚಿತ್ರಕ್ಕೆ ಸಿಗುತ್ತಿರುವ ಅಪಾರ ಪ್ರಶಂಸೆಗೆ ಧನ್ಯವಾದ ಅರ್ಪಿಸಿದರು. ಪ್ರೇಕ್ಷಕರು ಸಿನಿಮಾ ಜೊತೆ ಕನೆಕ್ಟ್ ಆಗಿ ಭಾವುಕರಾಗಿದ್ದನ್ನು ನೋಡಿ ಅವರು ಸಂತಸ ಹಂಚಿಕೊಂಡರು.
ದೇಶಾದ್ಯಂತ ಈ ಚಿತ್ರಕ್ಕೆ ಸಿಗುತ್ತಿರುವ ಅಭೂತಪೂರ್ವ ಪ್ರತಿಕ್ರಿಯೆಯ ಸಂಭ್ರಮವನ್ನು ಈ ಭೇಟಿ ಮತ್ತಷ್ಟು ಹೆಚ್ಚಿಸಿದೆ. ದಿಲ್ಜಿತ್ ದೋಸಾಂಜ್, ವೇದಾಂತ್ ರೈನಾ ಮತ್ತು ಶರ್ವರಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಮೇನ್ ವಾಪಸ್ ಆವುಂಗಾ’ ಸಿನಿಮಾ, ತನ್ನ ಹೃದಯಸ್ಪರ್ಶಿ ಕಥೆ ಮತ್ತು ಅದ್ಭುತ ನಟನೆಯ ಮೂಲಕ ಪ್ರೇಕ್ಷಕರ ಮನ ಗೆದ್ದಿದೆ.
ಜಬ್ ವಿ ಮೆಟ್, ಲವ್ ಆಜ್ ಕಲ್, ರಾಕ್ಸ್ಟಾರ್, ಹೈವೇ, ತಮಾಷಾ, ಕಾಕ್ಟೇಲ್ ಮತ್ತು ಜಬ್ ಹ್ಯಾರಿ ಮೆಟ್ ಸೆಜಲ್ ನಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಇಮ್ತಿಯಾಜ್ ಅಲಿ, ತಲೆಮಾರುಗಳನ್ನು ದಾಟಿ ಕಾಡುವ ಕಥೆಗಳ ಮೂಲಕ ಇಂದಿಗೂ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದಾರೆ. ಅವರ ಈ ಬೆಂಗಳೂರು ಭೇಟಿಯು ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ನಡೆದ ಅತ್ಯಂತ ಸ್ಮರಣೀಯ ಪ್ರಚಾರದ ಈವೆಂಟ್ಗಳಲ್ಲಿ ಒಂದಾಗಿದೆ.
ಬೆಂಗಳೂರಿನ ಪ್ರೀತಿಯ ಬಗ್ಗೆ ಇಮ್ತಿಯಾಜ್ ಅಲಿ ಮಾತುಗಳು:
“ನನ್ನ ಬೆಂಗಳೂರು ಭೇಟಿ ನಿಜಕ್ಕೂ ರೋಮಾಂಚನಕಾರಿಯಾಗಿತ್ತು. ಭರ್ತಿ ಆಗಿದ್ದ ಥಿಯೇಟರ್ಗಳಲ್ಲಿ ಪ್ರೇಕ್ಷಕರು ‘ಮೇನ್ ವಾಪಸ್ ಆವುಂಗಾ’ ಚಿತ್ರಕ್ಕೆ ಪ್ರತಿಕ್ರಿಯಿಸುತ್ತಿದ್ದ ರೀತಿ ಮರೆಯಲು ಸಾಧ್ಯವಿಲ್ಲ. ಸಿನಿಮಾ ಮುಗಿಯುವ ಹೊತ್ತಿಗೆ ಪ್ರೇಕ್ಷಕರಿಂದ ಸಿಕ್ಕ ಅಪಾರ ಪ್ರೀತಿ ನನ್ನ ಕಣ್ಣು ತೇವಗೊಳಿಸಿತು. ಬೆಂಗಳೂರು ಅತ್ಯಂತ ಯೂತ್ಫುಲ್ ಮತ್ತು ಕಾಸ್ಮೋಪಾಲಿಟನ್ ಸಿಟಿ. ಇಲ್ಲಿನ ಜನ ಕೇವಲ ಸಿನಿಮಾ ನೋಡಿ ಭಾವುಕರಾಗಲಿಲ್ಲ, ಬದಲಿಗೆ ಆ ಸಿನಿಮಾ ತಮ್ಮದೇ ಎಂಬಂತೆ ಸಂಭ್ರಮಿಸಿದರು.
ಥಿಯೇಟರ್ನಲ್ಲಿ ಸಿನಿಮಾ ಹೇಗೆ ಜೀವ ಪಡೆದುಕೊಳ್ಳುತ್ತದೆ ಎಂಬುದನ್ನು ನಾನು ಇಲ್ಲಿ ಕಣ್ಣಾರೆ ಕಂಡೆ. ಒಂಟಿಯಾಗಿ ಸಿನಿಮಾ ನೋಡುವುದಕ್ಕಿಂತ, ನೂರಾರು ಜನರ ಮಧ್ಯೆ ಒಟ್ಟಿಗೆ ಕುಳಿತು ಸಿನಿಮಾ ನೋಡುವುದರಲ್ಲಿರುವ ಮ್ಯಾಜಿಕ್ ದೊಡ್ಡದು. ಅದನ್ನು ಬೆಂಗಳೂರು ನನಗೆ ನೆನಪಿಸಿತು. ಇಲ್ಲಿನ ಜನ ಭಾವನೆಗಳನ್ನು ತುಂಬಾ ಚೆನ್ನಾಗಿ ವ್ಯಕ್ತಪಡಿಸುತ್ತಾರೆ, ಕಥೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಾರೆ.
‘ಮೇನ್ ವಾಪಸ್ ಆವುಂಗಾ’ ಕಥೆ ಪಂಜಾಬ್ ಹಿನ್ನೆಲೆಯಲ್ಲಿದ್ದರೂ, ಕಥೆಯಲ್ಲಿ ಮಾನವೀಯತೆ ಇದ್ದಾಗ ಭೌಗೋಳಿಕ ದೂರ ಮರೆಯಾಗುತ್ತದೆ ಎಂಬುದನ್ನು ನಾನು ಅರಿತುಕೊಂಡೆ. ಮಾನವೀಯ ಭಾವನೆಗಳಿಗೆ ಯಾವುದೇ ಗಡಿಗಳಿಲ್ಲ ಎಂಬುದಕ್ಕೆ ಬೆಂಗಳೂರಿನ ಪ್ರೇಕ್ಷಕರೇ ಸಾಕ್ಷಿ.
ಇಲ್ಲಿನ ಜನರ ಆತಿಥ್ಯ, ಪ್ರೀತಿ ಮತ್ತು ಉದಾರತೆಗೆ ನಾನು ಮನಸೋತಿದ್ದೇನೆ. ಅವರು ತೋರಿಸಿದ ಸಣ್ಣ ಸಣ್ಣ ಸೌಜನ್ಯದ ನಡವಳಿಕೆಗಳೂ ನನ್ನ ಹೃದಯ ಮುಟ್ಟಿವೆ.
ಪ್ರೇಕ್ಷಕರು ಥಿಯೇಟರ್ಗೆ ಬರುವ ತನಕ ನಾನು ಸಿನಿಮಾ ಮಾಡುತ್ತಲೇ ಇರುತ್ತೇನೆ ಎಂದು ನಾನು ಅವರಿಗೆ ಮಾತು ಕೊಟ್ಟಿದ್ದೇನೆ. ಹಾಗೆಯೇ ಬೆಂಗಳೂರಿನ ಜನ ಕೂಡ ನನ್ನ ಸಿನಿಮಾಗಳನ್ನು ಥಿಯೇಟರ್ನಲ್ಲೇ ಬಂದು ನೋಡುತ್ತೇವೆ ಎಂದು ಪ್ರಾಮಿಸ್ ಮಾಡಿದ್ದಾರೆ. ಇದು ನಮ್ಮಿಬ್ಬರ ನಡುವಿನ ಒಪ್ಪಂದ. ಇದಕ್ಕೆ ಪ್ರತಿಯಾಗಿ, ನೀವು ಥಿಯೇಟರ್ಗೆ ಬಂದು ನೋಡುವಂತಹ ಅತ್ಯುತ್ತಮ ಕಥೆಗಳನ್ನು ನೀಡುತ್ತಲೇ ಇರುತ್ತೇನೆ ಎಂದು ನಾನು ಮಾತು ನೀಡುತ್ತೇನೆ.” – ಇಮ್ತಿಯಾಜ್ ಅಲಿ




