ಶಿರಸಿ: ಮದುವೆ ಆಗುವುದಾಗಿ ಪುಸಲಾಯಿಸಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿದಲ್ಲದೇ, ಆಕೆಯನ್ನು ಪರರಾಜ್ಯಕ್ಕೆ ಕಳುಹಿಸಲು ಪ್ರಯತ್ನಿಸಿದ್ದ ಸುನೀಲ ಬೋವಿವಡ್ಡರ್’ಗೆ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸಂತ್ರಸ್ತೆಗೆ ನ್ಯಾಯ ಕೊಡಿಸುವುದಕ್ಕಾಗಿ ಸರ್ಕಾರಿ ವಕೀಲೆ ತನಿಜಾ ಬಿ ಹೊಸಪಟ್ಟಣ ಅವರು 27 ಸಾಕ್ಷಿದಾರರ ವಿಚಾರಣೆ ನಡೆಸಿ, 55 ದಾಖಲೆಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿ ವಾದ ಮಂಡಿಸಿದ್ದರು.
ಬನವಾಸಿ ಕಪ್ಪೆಗುಡ್ಡೆಯ ಮಮತಾಜ್ ಬೇಗಂ (ಹೆಸರು ಬದಲಿಸಿದೆ) ಎಂಬಾತರನ್ನು ಸುನೀಲ ಬೋವಿವಡ್ಡರ್ ಪ್ರೀತಿಸುವ ನಾಟಕವಾಡಿದ್ದ. ಆಕೆ ಒಪ್ಪಿಗೆ ಸೂಚಿಸದೇ ಇದ್ದರೂ ಪದೇ ಪದೇ ಪೀಡಿಸುತ್ತಿದ್ದ. 2021ರ ಡಿಸೆಂಬರ್ 12ರಂದು ಆಕೆಯನ್ನು ಅರಣ್ಯ ಪ್ರದೇಶಕ್ಕೆ ಆಹ್ವಾನಿಸಿದ್ದ. ಅಲ್ಲಿಂದ ಮುಂದೆ ತನ್ನ ಬೈಕಿನಲ್ಲಿ ಅಕ್ಕಿ ಆಲೂರಿಗೆ ಕರೆದೊಯ್ದಿದ್ದ. ಅಕ್ಕಿ ಆಲೂರಿನಲ್ಲಿದ್ದ ಸರೋಜಿನಿ ಹಾಗೂ ಜಯರಾಮ ಹುರುಳಿ ಸೇರಿ ಆ ಬಾಲಕಿಯನ್ನು ಶಿಖಾರಿಪುರಕ್ಕೆ ಕಳುಹಿಸಿದ್ದರು.
ಶಿಖಾರಿಪುರದ ಅಮಟೆಕೊಪ್ಪದಲ್ಲಿ ಸುನೀಲ ಬೋವಿವಡ್ಡರ್’ನ ಸಂಬoಧಿಕರ ಮನೆಯಲ್ಲಿ ಬಾಲಕಿ ವಾಸವಾಗಿದ್ದು, ರಾತ್ರಿ ವೇಳೆ ಬಾಲಕಿ ಮೇಲೆ ಸುನೀಲ ಅತ್ಯಾಚಾರವೆಸಗಿದ್ದ. ಅದಾದ ಎರಡು ದಿನ ಬಿಟ್ಟು ಆಕೆಯನ್ನು ಅಕ್ಕಿ ಆಲೂರಿಗೆ ಕರೆತಂದು ಬಿಟ್ಟಿದ್ದ. ಅಲ್ಲಿದ್ದ ಸರೋಜಿನಿ ಹಾಗೂ ಜಯರಾಮ ಹುರುಳಿ ಸಂತ್ರಸ್ತ ಬಾಲಕಿಯನ್ನು ರೈಲಿನ ಮೂಲಕ ಗುಜರಾತಿಗೆ ಕಳುಹಿಸಲು ತಯಾರಿ ನಡೆಸಿದ್ದರು. ಬಾಲಕಿ ಕೈಗೆ ಕಾಸು ಕೊಟ್ಟು ಇಡೀ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದರು.
ಈ ಎಲ್ಲಾ ವಿಷಯದ ಬಗ್ಗೆ ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರು. ನ್ಯಾಯಾಲಯಕ್ಕೆ ಪೊಲೀಸರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ಈ ಪ್ರಕರಣದ ವಿಚಾರಣೆ ನಡೆಸಿದ ಕಾರವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಪ್ರತಿಭಾ ಕುಲಕರ್ಣಿ ಅವರು ಸುನೀಲ ಬೋವಿವಡ್ಡರ್’ಗೆ 20 ವರ್ಷ ಜೈಲಿನ ಜೊತೆ 1 ಲಕ್ಷ ರೂ ದಂಡ ಪಾವತಿಸುವಂತೆ ಸೂಚಿಸಿ ಆದೇಶ ಹೊರಡಿಸಿದೆ. ದಂಡ ಪಾವತಿಸಲು ತಪ್ಪಿದಲ್ಲಿ ಮತ್ತೆ 1 ವರ್ಷ ಜೈಲು ಶಿಕ್ಷೆ ವಿಸ್ತರಿಸುವುದಾಗಿಯೂ ಎಚ್ಚರಿಸಿದೆ.




