ಆಧಾರ್ ಕಾರ್ಡ ಇಲ್ಲದ ಕಾರಣ ರೇಣುಕಾ ಗೌಡ ಅವರಿ ಶಕ್ತಿ ಯೋಜನೆ ಅಡಿ ಉಚಿತ ಬಸ್ ಪ್ರಯಾಣ ಭಾಗ್ಯ ಸಾಧ್ಯವಾಗಿರಲಿಲ್ಲ. ಇದನ್ನು ಅರಿತ ಕುಮಟಾ ತಹಶೀಲ್ದಾರ್ ಕಚೇರಿಯ ಅಟಲ್ ಜಿ ಜನಸ್ನೇಹಿ ಕೇಂದ್ರದ ಆಧಾರ್ ಆಪರೇಟರ್ ನವೀನ್ ಮೇತ್ರಿ ತಮ್ಮ ಸ್ವಂತ ವೆಚ್ಚದಲ್ಲಿ ಅವರಿಗೆ ಆಧಾರ್ ಕಾರ್ಡ ಮಾಡಿಸಿಕೊಟ್ಟಿದ್ದಾರೆ!
43 ವರ್ಷದ ರೇಣುಕಾ ಗೌಡ ಏಕಾಂಕಿ. ಬಾಲ್ಯದಲ್ಲಿಯೇ ಅವರ ತಂದೆ-ತಾಯಿ ಸಾವನಪ್ಪಿದ್ದಾರೆ. ಮೂರುರು ಕ್ರಾಸಿನ ಜನತಾ ಕಾಲೋನಿಯ ಒಂಟಿ ವೃದ್ಧೆಯೊಬ್ಬರ ಮನೆಯಲ್ಲಿ ರೇಣುಕಾ ಗೌಡ ಆಶ್ರಯ ಪಡೆದಿದ್ದಾರೆ. ದೇವಾಲಯಗಳ ಮುಂದೆ ಭಿಕ್ಷೆ ಬೇಡಿ ಬದುಕುತ್ತಿರುವ ರೇಣುಕಾ ಗೌಡ ಅವರ ಬಳಿ ಆಧಾರ್ ಮಾತ್ರವಲ್ಲ. ರೇಶನ್ ಕಾರ್ಡ ಸಹ ಇಲ್ಲ!
ಈ ವಿಷಯ ಅರಿತ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಸಾಕಷ್ಟು ಹೋರಾಟ ನಡೆಸಿ ಅವರಿಗೆ ಮತದಾರರ ಚೀಟಿ ಮಾಡಿಸಿಕೊಟ್ಟರು. ಆದರೆ ಅವರಿಗೆ ಅಗತ್ಯವಿರುವ ಆಧಾರ್ ಕಾರ್ಡ ಮಾಡಿಸಲು ಹತ್ತಾರು ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದವು. ಈ ಬಗ್ಗೆ ಅರಿತ ನಾಗಪ್ಪ ಮೇತ್ರಿ ಅವರು ರೇಣುಕಾ ಗೌಡ ಅವರನ್ನು ತಹಶೀಲ್ದಾರ್ ಸತೀಶ ಗೌಡ ಅವರ ಬಳಿ ಕರೆದೊಯ್ದರು. ಅವರ ಸಮಸ್ಯೆಗಳ ಬಗ್ಗೆ ಮೇಲಧಿಕಾರಿಗಳಿಗೆ ಮನವರಿಕೆ ಮಾಡಿದರು. ದಾಖಲಾತಿ ಸಲ್ಲಿಕೆಯಲ್ಲಿನ ತಾಂತ್ರಿಕ ತೊಡಕುಗಳನ್ನು ನಿವಾರಿಸುವ ಬಗ್ಗೆ ನಿವೇದಿಸಿದರು. ತಹಶೀಲ್ದಾರರ ಮೂಲಕ ಗ್ಯಾಜೇಟ್ ಅರ್ಜಿಗೆ ಸಹಿ ಹಾಕಿಸಿ, ಅದೇ ಆಧಾರದಲ್ಲಿ ಆಧಾರ್ ಕಾರ್ಡ ಮಾಡಿಸಿಕೊಟ್ಟರು.
`ನವೀನ ಮೇತ್ರಿ ಅವರು ಸಾರ್ವಜನಿಕ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಬೇಗ ಸ್ಪಂದಿಸುತ್ತಾರೆ. ಅಂಥ ನೌಕರರು ಇತರರಿಗೂ ಮಾದರಿ’ ಎಂದು ಜನಸಾಮಾನ್ಯ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಹಾಗೂ ಸುಧಾಕರ ನಾಯ್ಕ ಅಭಿಪ್ರಾಯಪಟ್ಟರು.




