ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ನಾಯಕ, ತಳವಾರ ಹೆಸರಿನಲ್ಲಿ ಪ್ರವರ್ಗ 1 ರಲ್ಲಿರುವ ಬೇರೆ ಸಮುದಾಯದವರು ಪ.ಪಂಗಡ ಪ್ರಮಾಣಪತ್ರ, ಸಿಂಧುತ್ವ ಪ್ರಮಾಣಪತ್ರ ಪಡೆದು ವಂಚಿಸುತ್ತಿರುವುದನ್ನು ಖಂಡಿಸಿ, ಕರ್ನಾಟಕ ರಾಜ್ಯ ದಲಿತ ರಕ್ಷಣಾ ವೇದಿಕೆಯ ಜಿಲ್ಲಾ ಸಮಿತಿಯಿಂದ ಯಲ್ಲಾಪುರದಲ್ಲಿ ತಹಸೀಲ್ದಾರ ಚಂದ್ರಶೇಖರ ಹೊಸ್ಮನಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರವರ್ಗ 1 ರಲ್ಲಿರುವ ಬೆಸ್ತ, ಅಂಬಿಗ, ಕಬ್ಬಲಿಗ, ಕಬ್ಬೇರ, ಕೂಲಿ ಮುಂತಾದ ಜಾತಿಯವರಿಗೆ ನಾಯಕ, ತಳವಾರ ಹೆಸರಿನಲ್ಲಿ ಜಾತಿ ಪ್ರಮಾಣಪತ್ರ ನೀಡುವುದನ್ನು ನಿಲ್ಲಿಸಬೇಕು. ವಾಮಮಾರ್ಗದಲ್ಲಿ ಅಂತಹ ಪ್ರಮಾಣಪತ್ರ ಪಡೆದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಇತರೆ ಹಿಂದುಳಿದ ಪ್ರವರ್ಗ 1 ರಲ್ಲಿ ಉಂಟಾದ ಗೊಂದಲಕ್ಕೆ ತೆರೆ ಎಳೆಯಬೇಕು. ಪ.ಪಂಗಡ ಇಲಾಖೆಗೆ ಸ್ವತಂತ್ರ ಸಚಿವರ ನೇಮಕ ಆಗಬೇಕು. ಈಗಾಗಲೇ ನೀಡಿದ ಸುಳ್ಳು ಜಾತಿ ಪ್ರಮಾಣಪತ್ರ ರದ್ದುಗೊಳಿಸಿ, ಅದನ್ನು ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು.
ಪ.ಪಂಗಡಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಹಣ ಕೂಡಲೇ ಬಿಡುಗಡೆ ಮಾಡಬೇಕು. ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸಿ, ವಾಲ್ಮಿಕೀ ನಾಯಕರ ಕುರಿತಾದ ಅಧ್ಯಯನಕ್ಕೆ ಅನುದಾನ ನೀಡಬೇಕು. ರಾಜ್ಯದಲ್ಲಿ ಅಪೂರ್ಣಗೊಂಡ ವಾಲ್ಮೀಕಿ ಭವನ ಕಾಮಗಾರಿಗಳ ಪೂರ್ಣತೆಗೆ 500 ಕೋಟಿ ರೂ ಅನುದಾನ ನೀಡಬೇಕು. ಈಗಾಗಲೇ ಗುರುತಿಸಿದ ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬಿ, ಹೊಸ ಹುದ್ದೆಗಳನ್ನು ಗುರುತಿಸಬೇಕು. ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪಿಸಿ ಸಂಶೋಧನ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು.
ವಾಲ್ಮೀಕಿ ನಾಯಕ ಜನಾಂಗದ ಮೇಲೆ ನಡೆಯುವ ದೌರ್ಜನ್ಯ ತಡೆಯಬೇಕು. ಉತ್ತರ ಕರ್ನಾಟಕದಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆಯುವುದನ್ನು ವಿರೋಧಿಸುವ ಹೋರಾಟಗಾರರ ಮೇಲೆ ದಾಖಲಿಸಿದ ಪ್ರಕರಣ ಹಿಂಪಡೆಯಬೇಕು. ಗಿರಿಜನ ಉಪಯೋಜನೆಯಡಿ ನೀಡುವ ಅನುದಾನ ಬೇರೆಯವರಿಗೆ ಉಪಯೋಗವಾಗದಂತೆ ತಡೆಯಬೇಕು. ನಿಯಮ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ವರ್ಗದ ಮೀಸಲಾತಿಯನ್ವಯ ಇಲಾಖೆಗಳಲ್ಲಿ ಪದೋನ್ನತಿಗೆ ವಿಳಂಬ ಮಾಡಬಾರದು.
ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಬೇರೆ ಬೇರೆ ಸಮುದಾಯಗಳನ್ನು ಎಸ್.ಟಿ ವರ್ಗಕ್ಕೆ ಸೇರಿಸುವುದಕ್ಕೆ ಮುಂದಾಗಬಾರದೆಂದು ಆಗ್ರಹಿಸಿದರು.
ಜಿಲ್ಲಾ ಸಮಿತಿ ಅಧ್ಯಕ್ಷ ಅರ್ಜುನ ಬೆಂಗೇರಿ, ತಾಲೂಕಾಧ್ಯಕ್ಷ ರಾಜಾರಾಮ ಯಾದವ, ಡಾ.ಅಂಬೇಡ್ಕರ್ ಬುಡಕಟ್ಟು ಸಿದ್ದಿ ಸಮುದಾಯ ಸಂಘದ ಅಧ್ಯಕ್ಷ ರಾಜೀಸಾಬ ನಾಯ್ಕರ್, ರೈತ ಮುಖಂಡ ಭೀಮಶಿ ವಾಲ್ಮೀಕಿ, ನೂರ ಅಹ್ಮದ್ ಮುಜಾವರ, ಚನ್ನಬಸಪ್ಪ ಹರಿಜನ ಉಪಸ್ಥಿತರಿದ್ದರು.







