ಬಿಗ್ ಬಾಸ್ ಕನ್ನಡ ಸೀಸನ್ 13: ಎಂಟ್ರಿ ದಿನವೇ ದೊಡ್ಮನೆಯಲ್ಲಿ ಕಿರಿಕ್! ‘ಆಂಟಿ’ ಎಂದಿದ್ದಕ್ಕೆ ಪ್ರಥಮಾ ಪ್ರಸಾದ್ ಗರಂ
ಬೆಂಗಳೂರು: ಬಹುನಿರೀಕ್ಷಿತ ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭವಾಗಿದ್ದು, ಮೊದಲ ದಿನವೇ ದೊಡ್ಮನೆಯಲ್ಲಿ ಕಿರಿಕ್ ಶುರುವಾಗಿದೆ. ಅಗ್ನಿ ಪರೀಕ್ಷೆಯ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಕಿರಣ್ ಶಾಸ್ತ್ರಿ ಹಾಗೂ ನೇರವಾಗಿ ಮನೆ ಪ್ರವೇಶಿಸಿರುವ ನಟಿ ವಿನಯಾ ಪ್ರಸಾದ್ ಅವರ ಪುತ್ರಿ ಪ್ರಥಮಾ ಪ್ರಸಾದ್ ನಡುವೆ ಆರಂಭದಲ್ಲೇ ಮಾತಿನ ಚಕಮಕಿ ನಡೆದಿದೆ.
ಸುದೀಪ್ ನೀಡಿದ ಟಾಸ್ಕ್ನಂತೆ ಕಿರಣ್ ಶಾಸ್ತ್ರಿ ಬಿಗ್ ಬಾಸ್ ಮನೆಯೊಳಗೆ ತೆರಳಿ ಸ್ಪರ್ಧಿಗಳ ಬಗ್ಗೆ ಶಾಸ್ತ್ರ ಹೇಳಬೇಕಿತ್ತು. ಈ ವೇಳೆ ಪ್ರಥಮಾ ಪ್ರಸಾದ್ ಅವರ ಸರದಿ ಬಂದಾಗ ಕಿರಣ್ ಶಾಸ್ತ್ರಿ ಅವರನ್ನು ‘ಆಂಟಿ ಬನ್ನಿ’ ಎಂದು ಕರೆದಿದ್ದಾರೆ.
ಇದರಿಂದ ಸಿಟ್ಟಾದ ಪ್ರಥಮಾ ಪ್ರಸಾದ್, “ಯಾರಿಗೆ ಆಂಟಿ ಅಂತಿದ್ದೀಯಾ? ಇಲ್ಲಿ ಯಾರಿಗೂ ನಾನು ಅಮ್ಮ, ಅಕ್ಕ, ಆಂಟಿ ಆಗಲು ಬಂದಿಲ್ಲ. ನನಗೆ ಹೆಸರಿದೆ, ಹೆಸರಿನಿಂದ ಕರೆದರೆ ಸಾಕು” ಎಂದು ಖಡಕ್ ಆಗಿ ಹೇಳಿದ್ದಾರೆ.
ಆದರೆ ಇದಕ್ಕೆ ಸುಮ್ಮನಾಗದ ಕಿರಣ್ ಶಾಸ್ತ್ರಿ, “ಆಂಟಿ ತರ ಕಾಣಿಸಿದ್ರಿ, ಅದಕ್ಕೆ ಹಾಗೆ ಕರೆದೆ” ಎಂದು ಹೇಳುವ ಮೂಲಕ ಮತ್ತೆ ಪ್ರಥಮಾ ಅವರನ್ನು ಕೆಣಕಿದ್ದಾರೆ.
ಇದಾದ ಬಳಿಕವೂ ಇವರಿಬ್ಬರ ನಡುವೆ ಮಾತಿನ ಸಮರ ಮುಂದುವರಿದಿದೆ. “ನಾನು ಯಾರಿಗೂ ಹೆದರಲ್ಲ, ಸಲಗ ಒದ್ದಂಗೆ” ಎಂದು ಪ್ರಥಮಾ ಹೇಳಿದಾಗ, ಅದಕ್ಕೆ ತಿರುಗೇಟು ನೀಡಿದ ಶಾಸ್ತ್ರಿ, “ಓಹ್, ನೀವು ಸಲಗ ಅಂದ್ರೆ ಆನೆ ತರನಾ? ನೋಡಿದಕ್ಕೂ ಹಾಗೇ ಇದ್ದೀರಾ ಬಿಡಿ” ಎಂದು ರೇಗಿಸಿದ್ದಾರೆ.
ಇದರಿಂದ ಮತ್ತಷ್ಟು ಕೋಪಗೊಂಡ ಪ್ರಥಮಾ ಪ್ರಸಾದ್, “ಒಬ್ಬರ ದೇಹದ ಆಕೃತಿ ಬಗ್ಗೆ ಮಾತನಾಡುವ ಅಧಿಕಾರ ನಿಮಗಿಲ್ಲ” ಎಂದು ಕಿರಣ್ ಶಾಸ್ತ್ರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಮನೆಯಲ್ಲಿದ್ದ ಕೆಲ ಸ್ಪರ್ಧಿಗಳು ಕೂಡ ಪ್ರಥಮಾ ಪ್ರಸಾದ್ ಪರವಾಗಿ ಮಾತನಾಡಿದ್ದು, “ಸ್ವಲ್ಪ ಸಮಾಧಾನದಿಂದ ಇರಿ, ಯಾಕೆ ಒಬ್ಬರಿಗೆ ಬೇಜಾರಾಗುವ ರೀತಿಯಲ್ಲಿ ಮಾತನಾಡುತ್ತೀರಿ?” ಎಂದು ಕಿರಣ್ ಶಾಸ್ತ್ರಿಗೆ ಹೇಳಿದ್ದಾರೆ.
ಒಟ್ಟಿನಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 13ರ ಮೊದಲ ದಿನವೇ ಕಿರಣ್ ಶಾಸ್ತ್ರಿ ಮತ್ತು ಪ್ರಥಮಾ ಪ್ರಸಾದ್ ನಡುವಿನ ಮಾತಿನ ಚಕಮಕಿ ಗಮನ ಸೆಳೆದಿದೆ. ಮುಂದಿನ ದಿನಗಳಲ್ಲಿ ಇವರಿಬ್ಬರ ನಡುವಿನ ಸಂಬಂಧ ಯಾವ ರೀತಿಯಲ್ಲಿ ಸಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.




