ಹಾವೇರಿ: ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಗಂಭೀರವಾಗಿ ವಾದ ಮಂಡಿಸುವಲ್ಲಿ ಎಡವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾವೇರಿ ನೀರನ್ನು ಮುಖ್ಯವಾಗಿ ಕುಡಿಯುವ ಉದ್ದೇಶಕ್ಕೆ ಬಳಸಲಾಗುತ್ತಿದೆ. ಆದರೆ ತಮಿಳುನಾಡು ಕುಡಿಯುವ ನೀರಿನ ಹೆಸರಿನಲ್ಲಿ ಕಾವೇರಿ ನೀರನ್ನು ಕೃಷಿಗೆ ಬಳಸುತ್ತಿದೆ ಎಂಬುದನ್ನು ಸಮರ್ಥವಾಗಿ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಆಲ್ ಪಾರ್ಟಿ ಸಭೆಯಲ್ಲೂ ಇದೇ ವಿಚಾರವನ್ನು ತಾವು ಪ್ರಸ್ತಾಪಿಸಿದ್ದಾಗಿ ತಿಳಿಸಿದ ಬೊಮ್ಮಾಯಿ, ಸರ್ಕಾರ ಕೇವಲ ಮಳೆ ಪ್ರಮಾಣ, ನೀರಿನ ಲಭ್ಯತೆ ಸೇರಿದಂತೆ ಅಂಕಿ-ಅಂಶಗಳನ್ನು ನೀಡುವುದಕ್ಕೆ ಸೀಮಿತವಾಗಿದೆ ಎಂದು ಟೀಕಿಸಿದರು.
“ತಮಿಳುನಾಡಿನಲ್ಲಿ ಮೂರು ಬೆಳೆ ಬೆಳೆಯುತ್ತಾರೆ. ನಮಗೆ ಒಂದು ಬೆಳೆ ಬೆಳೆಯುವುದೂ ಕಷ್ಟವಾಗಿದೆ” ಎಂದ ಅವರು, ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ವಿಶೇಷವಾಗಿ ಬೆಂಗಳೂರಿಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದರು.
ಬೆಂಗಳೂರು ಅಂತರಾಷ್ಟ್ರೀಯ ನಗರವಾಗಿರುವುದರಿಂದ ನೀರಿನ ಸಂರಕ್ಷಣೆ ಮಾಡುವುದು ಮುಖ್ಯಮಂತ್ರಿಗಳ ಕರ್ತವ್ಯ. ಆದರೆ ಈ ಕರ್ತವ್ಯವನ್ನು ನಿರ್ವಹಿಸದೆ ಮುಂದೆ ಬೆಂಗಳೂರಿಗೆ ನೀರು ಹೇಗೆ ಒದಗಿಸುತ್ತಾರೆ ಎಂದು ಪ್ರಶ್ನಿಸಿದರು.
ಕಾವೇರಿ ವಿಚಾರದಲ್ಲಿ ಸರ್ಕಾರದಿಂದ ಗಂಭೀರವಾದ ವಾದ ಮಂಡನೆಯಾಗಿಲ್ಲ ಎಂದು ಆರೋಪಿಸಿದ ಅವರು, ಇದೀಗ ಮತ್ತೊಮ್ಮೆ ಪರಿಶೀಲನೆಗೆ ಮುಂದಾಗುತ್ತಿರುವ ಸಂದರ್ಭದಲ್ಲಿ ಸರ್ಕಾರವಾದರೂ ಸಮರ್ಥವಾಗಿ ಕರ್ನಾಟಕದ ಪರ ವಾದ ಮಂಡಿಸಬೇಕು ಎಂದರು.
ಕೇವಲ ಅಧಿಕಾರಿಗಳು ತೆರಳಿ ಈ ಕೆಲಸ ಮಾಡಲು ಸಾಧ್ಯವಿಲ್ಲ. ಕಾವೇರಿ ನೀರಿನ ವಿಚಾರದಲ್ಲಿ ಹಿಂದೆ ಕೆಲಸ ಮಾಡಿದ ಹಿರಿಯರು ಹಾಗೂ ನೀರಿನ ಬಗ್ಗೆ ಪರಿಣತಿ ಹೊಂದಿರುವ ತಜ್ಞರನ್ನು ಒಳಗೊಂಡ ತಂಡವನ್ನು ಕರೆದೊಯ್ದು ವಾಸ್ತವಾಂಶಗಳನ್ನು ಮನವರಿಕೆ ಮಾಡಿಕೊಡಬೇಕು ಎಂದು ಬೊಮ್ಮಾಯಿ ಸಲಹೆ ನೀಡಿದರು.
“ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆ ಎದುರಾಗಲಿದೆ. ಈಗಿರುವ ನೀರನ್ನಾದರೂ ಉಳಿಸಿಕೊಳ್ಳಲು ಸರ್ಕಾರ ಪ್ರಯತ್ನಿಸಬೇಕು” ಎಂದು ಬಸವರಾಜ ಬೊಮ್ಮಾಯಿ ಹೇಳಿದರು.




