ಹಾವೇರಿ: ED ಮತ್ತು CBI ದಾಳಿಗಳು ರಾಜಕೀಯ ಪ್ರೇರಿತವಾಗಿವೆ ಎಂಬ ಆರೋಪವನ್ನು ನಾವು ಒಪ್ಪುವುದಿಲ್ಲ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ED ಮತ್ತು CBI ಸೇರಿದಂತೆ ತನಿಖಾ ಸಂಸ್ಥೆಗಳು ಸಾಂವಿಧಾನಿಕ ಸಂಸ್ಥೆಗಳಾಗಿವೆ. ಯಾರ ಒತ್ತಡಕ್ಕೂ ಈ ಸಂಸ್ಥೆಗಳು ಕೆಲಸ ಮಾಡುವುದಿಲ್ಲ ಎಂದು ಹೇಳಿದರು.
ನೆಹರು ಅವರ ಕಾಲದಲ್ಲಿಯೂ ED, CBI ಸೇರಿದಂತೆ ಹಲವು ದಾಳಿಗಳು ನಡೆದಿವೆ. ಆ ದಾಳಿಗಳನ್ನೆಲ್ಲಾ ರಾಜಕೀಯ ಪ್ರೇರಿತ ಎಂದು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು.
ದಾಖಲೆಗಳಿಲ್ಲದೆ ಯಾವುದೇ ರೀತಿಯಲ್ಲೂ ತನಿಖಾ ಸಂಸ್ಥೆಗಳು ದಾಳಿ ನಡೆಸುವುದಿಲ್ಲ. ದಾಖಲೆಗಳು ಸಿಕ್ಕ ಬಳಿಕವೇ ತನಿಖಾ ಸಂಸ್ಥೆಗಳು ಮುಂದಿನ ಕ್ರಮ ಕೈಗೊಳ್ಳುತ್ತವೆ ಎಂದು ಗೋವಿಂದ ಕಾರಜೋಳ ತಿಳಿಸಿದರು.
‘ನಮ್ಮ ಪಕ್ಷದ ಸಂಸದನ ಮೇಲೂ ದಾಳಿ ನಡೆದಿತ್ತು’
ಈ ಹಿಂದೆ ತಮ್ಮ ಪಕ್ಷದ ದಾವಣಗೆರೆ ಸಂಸದನ ಮೇಲೂ ದಾಳಿ ನಡೆದಿತ್ತು. ತಮ್ಮ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದಾಗಲೂ ದಾಳಿ ನಡೆದಿದೆ ಎಂದು ಗೋವಿಂದ ಕಾರಜೋಳ ಹೇಳಿದರು.
ED ಅಧಿಕಾರಿಗಳು ವ್ಯಕ್ತಿಯ ಮುಖ ನೋಡಿ ಮಣೆ ಹಾಕುವುದಿಲ್ಲ. ತನಿಖೆ ವೇಳೆ ಸಿಗುವ ದಾಖಲೆಗಳು ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎಂದು ಅವರು ಹೇಳಿದರು.
ಸತೀಶ್ ಜಾರಕಿಹೊಳಿ ಬಗ್ಗೆ ಕಾರಜೋಳ ಹೇಳಿದ್ದೇನು?
ಸಚಿವ ಸತೀಶ್ ಜಾರಕಿಹೊಳಿ ಅವರನ್ನು ತಾವು ಹತ್ತಿರದಿಂದ ಬಲ್ಲೆ ಎಂದು ಹೇಳಿದ ಗೋವಿಂದ ಕಾರಜೋಳ, ತಾವು ಬೆಳಗಾವಿ ಉಸ್ತುವಾರಿಯಾಗಿ ಕೆಲಸ ಮಾಡಿದ್ದ ಸಂದರ್ಭದಲ್ಲಿಯೂ ಅವರೊಂದಿಗೆ ಪರಿಚಯವಿದೆ ಎಂದರು.
ಆದರೆ ಸತೀಶ್ ಜಾರಕಿಹೊಳಿ ವಿರುದ್ಧ ನಡೆಯುತ್ತಿರುವ ತನಿಖೆಯ ಕುರಿತು ತಾವು ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.




