ಬೈಕಿನಲ್ಲಿ ಪ್ರವಾಸಕ್ಕೆ ಬಂದಿದ್ದ ಜಾರ್ಖಂಡ್ ಮೂಲದ ಸಾಪ್ಟ್ವೇರ್ ಇಂಜಿನಿಯರ್ ನಿಹಾರಿಕಾ ಶರ್ಮಾ (25) ಯಲ್ಲಾಪುರದ ಅರಬೈಲ್ ಹೆದ್ದಾರಿ ಹೊಂಡಕ್ಕೆ ಬಿದ್ದು ಗಾಯಗೊಂಡಿದ್ದು, ಅವರ ಬೈಕ್ ಮೇಲೆ ಕಂಟೇನರ್ ಹತ್ತಿದೆ.
ಸಾಹಸ ಚಟುವಟಿಕೆಗಳಲ್ಲಿ ಹೆಚ್ಚಿಗೆ ಭಾಗವಹಿಸುತ್ತಿದ್ದ ನಿಹಾರಿಕಾ ಶರ್ಮ ಪಶ್ಚಿಮಘಟ್ಟದಲ್ಲಿ ಏಕಾಂಕಿಯಾಗಿ ಬೈಕ್ ಓಡಿಸುವ ಹುಮ್ಮಸ್ಸು ಮಾಡಿದ್ದರು. ಇದಕ್ಕಾಗಿ ಯಲ್ಲಾಪುರದ ಅರಬೈಲ್ ಘಟ್ಟವನ್ನು ಅವರು ಪ್ರವೇಶಿಸಿದ್ದರು. ಆದರೆ, ಹೆದ್ದಾರಿಯ ಹೊಂಡಗಳ ಬಗ್ಗೆ ಅವರಿಗೆ ಅರಿವಿರಲಿಲ್ಲ!
ಅರಬೈಲ್ ಘಟ್ಟದಲ್ಲಿ ಸಹ ಎಂದಿನ ವೇಗದಲ್ಲಿ ಬೈಕ್ ಓಡಿಸಿಕೊಂಡು ಬಂದ ಅವರಿಗೆ ಹೆದ್ದಾರಿ ಹೊಂಡ ಮಾರಕವಾಯಿತು. ಹೊಂಡ ಹಾರಿದ ಬೈಕ್ ಜೊತೆ ಅವರು ರಸ್ತೆಗೆ ಬಿದ್ದರು. ಇದರಿಂದ ಅವರು ಪೆಟ್ಟು ಮಾಡಿಕೊಂಡಿದ್ದು, ಚೇತರಿಸಿಕೊಳ್ಳುವುದರೊಳಗೆ ಅಂಕೋಲಾ ಕಡೆಯಿಂದ ಬಂದ ಕೇರಳದ ಕಂಟೇನರ್ ಲಾರಿ ರಸ್ತೆ ಮೇಲೆ ಬಿದ್ದಿದ್ದ ಬೈಕಿನ ಮೇಲೆ ಹತ್ತಿ ಮುಂದೆ ಹೋಯಿತು. ಅಲ್ಲಿಯೇ ಬಿದ್ದಿದ್ದ ನಿಹಾರಿಕಾ ಶರ್ಮಾ ಕೂದಲೆಳೆಯ ಅಂತರದಿoದ ಪಾರಾಗಿದ್ದಾರೆ. ಈ ಆಘಾತದಿಂದ ಎರಡು ದಿನಗಳ ಕಾಲ ಸುಧಾರಿಸಿಕೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು ಅಗಸ್ಟ್ 5ರಂದು ಪೊಲೀಸ್ ಠಾಣೆಗೆ ಬಂದು ಘಟನಾವಳಿಗಳ ಬಗ್ಗೆ ವಿವರಿಸಿದ್ದಾರೆ.
ತನ್ನ ಬೈಕ್ ಜಖಂ ಮಾಡಿದ ಲಾರಿ ಚಾಲಕನನ್ನು ಪತ್ತೆ ಮಾಡಿ, ಕ್ರಮ ಜರುಗಿಸುವಂತೆ ದೂರು ಸಲ್ಲಿಸಿದ್ದಾರೆ.
ಹೆದ್ದಾರಿ ಹೊಂಡಕ್ಕೆ ಹೊಣೆ ಯಾರು?
ಹುಬ್ಬಳ್ಳಿ – ಅಂಕೋಲಾ ಹೆದ್ದಾರಿಯಲ್ಲಿ ದೊಡ್ಡ ದೊಡ್ಡ ಹೊಂಡಗಳಾಗಿದ್ದು, ಇದಕ್ಕೆ ಹೊಣೆಯಾರು ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಪ್ರತಿ ವರ್ಷ ಇಲ್ಲಿ ಹೊಂಡ ಮುಚ್ಚುವ ಕೆಲಸ ನಡೆದರೂ ಮತ್ತೆ ಮತ್ತೆ ಹೊಂಡ ಬೀಳುವುದು ಕಡಿಮೆಯಾಗಿಲ್ಲ. ನಿತ್ಯ ಸಾವಿರ ಸಂಖ್ಯೆಯಲ್ಲಿ ವಾಹನ ಸಂಚರಿಸುವ ಈ ಮಾರ್ಗದಲ್ಲಿ ಹೊಂಡಗಳನ್ನು ತಪ್ಪಿಸಲು ಹೋಗಿಯೇ ಆಗುವ ಅನಾಹುತಗಳು ಲೆಕ್ಕಕ್ಕಿಲ್ಲ. ಅತಿ ಹೆಚ್ಚು ತಿರುವುಗಳಿರುವ ಪ್ರದೇಶದಲ್ಲಿಯೇ ಹೊಂಡಗಳು ಅಧಿಕವಾಗಿದೆ.





Discussion about this post