ಕಾರವಾರ: ಜನಪರ ಹಾಗೂ ಸ್ನೇಹಪರ ವ್ಯಕ್ತಿತ್ವದ ಕಂದಾಯ ಅಧಿಕಾರಿ ಪರಶುರಾಮ ನಾಯಿಕ ಅವರ ಪುತ್ರಿ ಸುಪ್ರಜಾ ನಾಯಿಕ ಅವರಿಗೆ ಬಂಗಾರದ ಪದಕ ದೊರೆತಿದೆ. ಗದಗದ ಕನಕದಾಸ ಶಿಕ್ಷಣ ಸಮಿತಿಯ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿಯ ಸಮಾಜಶಾಸ್ತ್ರ ವಿಭಾಗದಲ್ಲಿ ಅವರು ಬಂಗಾರದ ಪದಕ ಗೆಲ್ಲುವ ಸಾಧನೆ ಮಾಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಅಂಕ ಪಡೆದು ಅವರು ಪದಕ ಗೆದ್ದಿದ್ದಾರೆ.
ಧಾರವಾಡದ ಗಾಂಧಿ ಭವನದಲ್ಲಿ ಜರುಗಿದ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ 74ನೇ ಘಟಿಕೋತ್ಸವದಲ್ಲಿ ಉಪಕುಲಪತಿಗಳು ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ ಅವರು ಸುಪ್ರಜಾ ಅವರಿಗೆ ಪದಕ ನೀಡಿ ಗೌರವಿಸಿದರು. ಸುಪ್ರಜಾ ಅವರು ಕಾರವಾರದಲ್ಲಿ ಸಹ ಕಲಿತಿದ್ದಾರೆ. ಅವರ ತಂದೆ ಪರಶುರಾಮ ನಾಯಿಕ ಅವರು ಕಾರವಾರದಲ್ಲಿ ಉಪತಹಶೀಲ್ದಾರ್ ಆಗಿ ಜನ ಮೆಚ್ಚುಗೆ ಪಡೆದಿದ್ದರು. ಪ್ರಸ್ತುತ ಅವರು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅರಭಾವಿಯ ಉಪತಹಶೀಲ್ದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.




