ಹಳಿಯಾಳ: ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಇಬ್ಬರಿಗೂ ಅನ್ಯಾಯವಾಗದಂತೆ ಸಮತೋಲನದ ನಿರ್ಣಯ ಕೈಗೊಂಡಿದ್ದಾರೆ.
2023-24ರ ಅವಧಿಯಲ್ಲಿ ಪ್ರತಿ ಟನ್ ಕಬ್ಬಿಗೆ ರೈತರಿಗೆ 3678ರೂ ನೀಡಬೇಕು ಎಂದು ಸರ್ಕಾರ ಸೂಚಿಸಿತ್ತು. ಕಾರ್ಖಾನೆಯವರು ಕಟಾವು ಹಾಗೂ ಸಾಗಾಣಿಕಾ ವೆಚ್ಚ ಕಳೆದು 2826ರೂ ಪಾವತಿಸುತ್ತಿದ್ದರು. ಈ ವರ್ಷಕ್ಕೆ ಪ್ರತಿ ಟನ್ ಕಬ್ಬಿಗೆ 3685ರೂ ಪಾವತಿಸುವಂತೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕಾರ್ಖಾನೆಯವರಿಗೆ ಸೂಚಿಸಿದ್ದು, ಕಟಾವು ಹಾಗೂ ಸಾಕಾಣಿಕಾ ವೆಚ್ಚ ಕಳೆದು 2975ರೂ ಪಾವತಿಸಲು ಕಾರ್ಖಾನೆಯವರು ಒಪ್ಪಿಕೊಂಡರು. ಇದರಿಂದ ಕಳೆದ ವರ್ಷಕ್ಕಿಂತ ಹೆಚ್ಚಿನ ಮೊತ್ತ ರೈತರಿಗೆ ಸಿಗಲದೆ.
ಇನ್ನೂ ಪ್ಯಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕಟಾವಣೆ ಮಾಡಿದ ಕಬ್ಬಿನ ತೂಕ ಹಾಗೂ ಇಳುವರಿ ಪರಿಶೀಲನೆಗೆ ತಹಶೀಲ್ದಾರ್ ಹಾಗೂ ರೈತ ಮುಖಂಡರ ಸಮ್ಮುಖದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿಯವರು ಕಾರ್ಖಾನೆಗೆ ಭೇಟಿ ನೀಡಿ ತೂಕ ಹಾಗೂ ಇಳುವರಿ ಪರಿಶೀಲನೆಯ ಹೊಣೆ ಹೊತ್ತಿದ್ದಾರೆ. ಪ್ಯಾರಿ ಕಾರ್ಖಾನೆ ಪ್ರತಿನಿಧಿಗಳು ಸಹ ಕಬ್ಬು ಕಟಾವಣೆ ಮಾಡುವ ಗ್ರಾಮವಾರು ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದು, ಈ ಬಗ್ಗೆ `ಗ್ರಾ ಪಂ ಕಚೇರಿಯಲ್ಲಿ ಸಹ ಪ್ರಚಾರ ಮಾಡಬೇಕು’ ಎಂದು ಸೂಚಿಸಲಾಗಿದೆ. `ಕಬ್ಬು ಕಟಾವು ಮಾಡುವ ಪ್ರಕ್ರಿಯೆಯನ್ನು ಪ್ಯಾರಿ ಕಾರ್ಖಾನೆಯವರು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
`ಕಬ್ಬು ಕಟಾವು ಮಾಡದೇ ಲಾಗಣಿ/ಭಕ್ಷಿಸು ಪಡೆದು ರೈತರಿಗೆ ಗೊಂದಲ ಮಾಡಿದರೆ ಕಾನೂನು ಕ್ರಮ ಅನಿವಾರ್ಯ’ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕಾರ್ಖಾನೆಯವರಿಗೆ ಎಚ್ಚರಿಕೆ ನೀಡಿದರು. `ತೂಕ ಅಳತೆಯ ಬಗ್ಗೆ ರೈತರಿಗೆ ಎಸ್ಎಂಎಸ್ ಮೂಲಕವೂ ಮಾಹಿತಿ ಸಿಗಬೇಕು. ಎಲ್ಲದಕ್ಕೂ ರಸೀದಿ ನೀಡಬೇಕು’ ಎಂದು ಸಹ ಹೇಳಿದರು.





