ಶಿರಸಿ: ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಚಾರ ಮಾಡುತ್ತಿದ್ದಾರೆ. ಈ ಯೋಜನೆಗಳನ್ನು ಜನರಿಗೆ ತಲುಪಿಸುವುದಕ್ಕಾಗಿ ಅವರು ಜನ ಜಾಗೃತಿ ಭಾಷಣ ಮಾಡುತ್ತಿದ್ದಾರೆ.
ಮಂಗಳವಾರ ಶಿರಸಿಯ ಎಮ್. ಇ. ಎಸ್ ಕಾನೂನು ಕಾಲೇಜಿನಲ್ಲಿ ಶಿವಮೊಗ್ಗದ ಕೇಂದ್ರ ಸಂವಹನ ಇಲಾಖೆ ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನದಲ್ಲಿ ಅವರು ಇದೇ ವಿಷಯವಾಗಿ ಮಾತನಾಡಿದರು. `ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಗ್ರಾಮೀಣ ಭಾಗಗಳಿಗೆ ತಲುಪಿಸುವ ಅಗತ್ಯವಿದೆ. ಹಳ್ಳಿಗಳ ಜನರು ಕೇಂದ್ರ ಸರ್ಕಾರದ ಕೃಷಿ, ಪಿಂಚಣಿ ಹಾಗೂ ವಿಮಾ ಯೋಜನೆಗಳ ಅನುಕೂಲತೆ ಪಡೆಯಬೇಕು’ ಎಂದು ಕರೆ ನೀಡಿದರು.
`ಸಮಗ್ರ ಆರೋಗ್ಯ ರಕ್ಷಣೆಗಾಗಿ ಪರಿಚಯಿಸಿರುವ ಆಯುಷ್ಮಾನ್ ಭಾರತ ಯೋಜನೆಯ ಅನುಕೂಲವನ್ನು 70 ವರ್ಷ ವಯೋಮಾನದವರಿಗೂ ವಿಸ್ತರಿಸಲಾಗಿದೆ. ಮಹಿಳೆಯರು ಹಾಗೂ ಮಕ್ಕಳಿಗಾಗಿ ಹಲವಾರು ಉತ್ತಮ ಯೋಜನೆಗಳಿವೆ’ ಎಂದರು. `ಸೂರ್ಯ ಘರ್ ಯೋಜನೆಯಡಿ ಗ್ರಾಮೀಣ ಭಾಗಗಳ ಜನರು ಸೋಲಾರ್ ಫಲಕ ಅಳವಡಿಸಿ ವಿದ್ಯುತ್ ಶಕ್ತಿ ಉಳಿತಾಯ ಮಾಡಬಹುದು. ಮುಂದಿನ ಐದು ವರ್ಷಗಳಲ್ಲಿ ಭಾರತ ಪ್ರಪಂಚದ ಮೂರನೇ ಬಲಿಷ್ಟ ರಾಷ್ಟ್ರವಾಗಿ ಹೊರಹೊಮ್ಮಲಿದ್ದು, ಮೇಕ್ ಇನ್ ಇಂಡಿಯಾ ಯೋಜನೆಯಡಿ ಪ್ರತಿಭಾ ಪಲಾಯನ ತಡೆಯಲಾಗಿದೆ. ಇದರಿಂದ ದೇಶ ನಿರ್ಮಾಣದಲ್ಲಿ ಯುವಜನರು ನಮ್ಮೊಂದಿಗೆ ಕೈಜೋಡಿಸಲಿದ್ದಾರೆ’ ಎಂದು ಹೇಳಿದರು.
ಸೂರ್ಯ ಘರ್ ಯೋಜನೆ, ಮುದ್ರ, ಸ್ವ ನಿಧಿ, ವಿಕಸಿತ ಭಾರತ ಬಜೆಟ್ ಕುರಿತು ಪೂರ್ಣ ಫಲಕಗಳನ್ನು ಕಾಲೇಜಿನಲ್ಲಿ ಅಳವಡಿಸಲಾಗಿದೆ. ಸೂರ್ಯ ಘರ್, ಪಿಂಚಣಿ ಯೋಜನೆ, ಮಾತೃವಂದನ ಹಾಗೂ ಆಯುಷ್ಮಾನ್ ಭಾರತ ಕುರಿತು ವಿಶೇಷ ಕಾರ್ಯಗಾರಗಳು ಬುಧವಾರವೂ ನಡೆಯಲಿದೆ.





