ಸಿದ್ದಾಪುರ: ಮನ್ಮನೆ ಗ್ರಾ ಪಂ ವ್ಯಾಪ್ತಿಯ ಮಳಲವಲ್ಲಿಯಲ್ಲಿ ಕೈಗಾರಿಕಾ ಸ್ಥಾಪನೆಗೆ ಆ ಭಾಗದವರ ವಿರೋಧ ವ್ಯಕ್ತವಾಗಿದೆ.
ಗೋಮಾಳದ ಜಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉದ್ದೇಶಿಸಿರುವುದನ್ನು ಜನ ಖಂಡಿಸಿದ್ದಾರೆ. ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತರು ತಮ್ಮ ದನ-ಕರುಗಳನ್ನು ಸಹ ಹೊಡೆದುಕೊಂಡು ಬಂದಿದ್ದರು. ಮೆರವಣಿಗೆಯಲ್ಲಿ ಭಾಗವಹಿಸಿದ ಪ್ರತಿಭಟನಾಕಾರರ ಜೊತೆ ಜಾನುವಾರುಗಳು ಹೆಜ್ಜೆ ಹಾಕಿದವು. `ಗೋವುಗಳನ್ನು ಪೂಜಿಸಿ. ನಮ್ಮನ್ನು ಉಳಿಸಿ’ ಎಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.
`ನಿಯಮಗಳ ಪ್ರಕಾರ 100 ಜಾನುವಾರುಗಳಿಗೆ 30 ಎಕರೆ ಗೋಮಾಳದ ಪ್ರದೇಶ ಮೀಸಲಿರಬೇಕು. ಈ ಭಾಗದಲ್ಲಿ ಸಾವಿರಕ್ಕೂ ಅಧಿಕ ಗೋವುಗಳಿವೆ. ಆದರೆ, ಗೋಮಾಳ ಇರುವುದು 14 ಎಕರೆ ಮಾತ್ರ. ಪ್ರಸ್ತುತ ಅದನ್ನು ಸಹ ಬೇರೆ ಉದ್ದೇಶಕ್ಕೆ ಬಳಸುವುದು ಸರಿಯಲ್ಲ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
`ಈಗಿರುವ 14 ಎಕರೆ ಭೂಮಿಯನ್ನಾದರೂ ಗೋವುಗಳ ಆಶ್ರಯಕ್ಕಾಗಿ ಬಿಡಿ. ಅಲ್ಲಿ ಯಾವುದೇ ಕೈಗಾರಿಕೆ ಬರುವುದು ಬೇಡ’ ಎಂದು ಒತ್ತಾಯಿಸಿದರು. `ಗೋವಿನ ಮೇವಿಗೆ ಸರಿಯಾದ ಹುಲ್ಲು ಸಿಗುತ್ತಿಲ್ಲ. ಗೋಮಾಳ ಜಾಗವನ್ನು ಸಹ ಬೇರೆ ಉದ್ದೇಶಕ್ಕೆ ಬಳಸಿದರೆ ಹೈನುಗಾರಿಕೆ ನಡೆಸುವುದು ಕಷ್ಟ’ ಎಂದು ಅವಲತ್ತುಕೊಂಡರು.




