ಯಲ್ಲಾಪುರ: ರವೀಂದ್ರನಗರದಲ್ಲಿ ಉಪಯೋಗಕ್ಕಿಲ್ಲದ ಬೋರ್ವೆಲ್’ಗೆ ಪ ಪಂ ಅಧಿಕಾರಿಗಳು ಮರುಜೀವ ನೀಡಿದ್ದಾರೆ. ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಬೋರ್ವೆಲ್ ಬಳಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಮುಂಡಗೋಡ ರಸ್ತೆಯ ಆಂಜಿನೇಯ ದೇವಾಲಯ ಪಕ್ಕ ಹಳೆಯ ಕಾಲದಿಂದಲೂ ಬೋರ್ವೆಲ್ ಇದ್ದು, ಅದು ಸುಸ್ಥಿತಿಯಲ್ಲಿರಲಿಲ್ಲ. ಅಲ್ಲಿನ ಲಕ್ಷ್ಮೀ ಬೋವಿ ಅವರ ಮನೆ ಪಕ್ಕದ ಬೋರ್ವೆಲ್ ಸಹ ಬಳಕೆಯಲ್ಲಿರಲಿಲ್ಲ. ಈ ಎರಡು ಬೋರ್ವೆಲ್’ನ ಹ್ಯಾಂಡ್ ಪಂಪ್ ಹಾಳಾದ ಕಾರಣ ಕಳೆದ 4 ವರ್ಷಗಳಿಂದ ನೀರು ಸಿಗುತ್ತಿರಲಿಲ್ಲ.
ಈ ಬಗ್ಗೆ ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ ಪ ಪಂ ಅಧಿಕಾರಿ ಸುನೀಲ ಗಾವಡೆ ಅವರ ಗಮನಕ್ಕೆ ತಂದಿದ್ದರು. ಅದರ ಪ್ರಕಾರ ಇಂಜಿನಿಯರ್ ಹೇಮಚಂದ್ರ ನಾಯ್ಕ ಸ್ಥಳ ಪರಿಶೀಲನೆ ನಡೆಸಿದ್ದರು. ಬೋರ್ವೆಲ್’ಗೆ ಸಾಕಷ್ಟು ಪ್ರಮಾಣದಲ್ಲಿ ನೀರಿದ್ದು, ಹ್ಯಾಂಡ್ಪAಪ್ ಮಾತ್ರ ಹಾಳಾಗಿದನ್ನು ಅವರು ಖಚಿತಪಡಿಸಿದರು.
ಈ ಹಿನ್ನಲೆ ಶನಿವಾರ 1.5 ಎಚ್ಪಿ ಸಾಮರ್ಥ್ಯದ ಮೋಟರನ್ನು ಬೋರ್ವೆಲ್’ಗೆ ಅಳವಡಿಸಲಾಯಿತು. ಪರಿಣಾಮ ಭೂಮಿ ಆಳದಲ್ಲಿದ್ದ ನೀರು ಚಿಮ್ಮಿದ್ದು, ಆ ಭಾಗದ ಜನ ಸಂತಸ ವ್ಯಕ್ತಪಡಿಸಿದರು. `ಬಳಕೆಗೆ ಬಾರದ ಬೋರ್ವೆಲ್’ಗೆ ಮೋಟರ್ ಅಳವಡಿಸಿದ ಪರಿಣಾಮ ದಿನದ 24 ಗಂಟೆಯೂ ನೀರು ಸಿಗುತ್ತಿದೆ. ಈ ಭಾಗದಲ್ಲಿನ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗಿದೆ’ ಎಂದು ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ತಿಳಿಸಿದರು.




