ಸಿದ್ದಾಪುರ: ಬೇಡ್ಕಣಿ ಠಾಣಗೇರಿಯ ಜಯಂತ ನಾಯ್ಕ ಅವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆ.
ನ 14ರಂದು ಜಯಂತ ನಾಯ್ಕ ಅವರು ಗದ್ದೆ ಕೆಲಸಕ್ಕೆ ಹೋಗಿದ್ದರು. ಕೆಲಸಕ್ಕೆ ಹೋಗುವ ಮುನ್ನ ಮನೆಗೆ ಬೀಗ ಹಾಕಿದ್ದರು. ಸಂಜೆ ಅವರು ಮನೆಗೆ ಬಂದಾಗ ಮನೆ ಒಳಗಡೆಯಿಂದ ಚಿಲಕ ಹಾಕಿಕೊಂಡಿತ್ತು. ಹೀಗಾಗಿ ಅಣ್ಣನ ಮನೆ ಪಾರ್ಟೇಶನ್ ತೆರೆದು ಅಲ್ಲಿಂದ ಅವರು ಮನೆ ಒಳಗೆ ಪ್ರವೇಶಿಸಿದ್ದು, ಆಗ ಕಳ್ಳತನ ನಡೆದಿರುವುದು ಗೊತ್ತಾಯಿತು.
ಗೋದ್ರೇಜ್ ಕಪಾಟಿನ ಬಾಗಿಲು ತೆರೆದ ಕಳ್ಳರು ಅಲ್ಲಿದ್ದ ಬಂಗಾರದ ಬುಗುಡಿ, ಸರಪಳಿ, ಉಂಗುರ ಸೇರಿ 1.26 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ದೋಚಿದ್ದರು. ಈ ಬಗ್ಗೆ ಜಯಂತ ನಾಯ್ಕರು ಬೆಂಗಳೂರಿನಲ್ಲಿರುವ ಮಗನಿಗೆ ಫೋನ್ ಮಾಡಿ ತಿಳಿಸಿದ್ದು, ಮಗ ಸಹ ಮನೆಗೆ ಬಂದು ಕಳ್ಳತನವಾಗಿರುವುದನ್ನು ನೋಡಿದರು.
ಇನ್ನೂ ಕಳ್ಳತನ ನಡೆದಿ ದಿನದಿಂದ ಜಯಂತ ನಾಯ್ಕ ಅವರ ಅಣ್ಣನ ಮಗ ಗಣಪತಿ ನಾಯ್ಕ ಕಾಣುತ್ತಿಲ್ಲ. ಹೀಗಾಗಿ ಆತನೇ ಈ ಕಳ್ಳತನ ನಡೆಸಿರುವ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಜಯಂತ ನಾಯ್ಕ ಅಣ್ಣನ ಮಗನ ಮೇಲೆ ಅನುಮಾನವಿರುವುದಾಗಿ ಪೊಲೀಸ್ ದೂರು ನೀಡಿದ್ದಾರೆ.




