ಯಲ್ಲಾಪುರ: ಸರ್ಕಾರಿ ಜಾಗ ಅತಿಕ್ರಮಿಸಿ ಅದನ್ನು ಮಾರಾಟ ಮಾಡುವವರಿಂದ ಜೀವ ಬೆದರಿಕೆ ಬಂದ ಬಗ್ಗೆ ಹೋರಾಟಗಾರರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ನ್ಯಾಯಾಲಯದಲ್ಲಿ ದಾಖಲಿಸಿದ ದೂರು ಹಿಂಪಡೆಯುವoತೆ ಒತ್ತಾಯಿಸಿ ಬೆದರಿಕೆ ಒಡ್ಡಿದವರ ವಿರುದ್ಧ ದೂರು ಸಲ್ಲಿಸಿದ್ದಾರೆ.
ಬಾಳಗಿಮನೆಯ ಮಂಜುನಾಥ ಹೆಗಡೆ ಹಾಗೂ ಕಾಳಮ್ಮನಗರದ ಅಬ್ದುಲ್ ರಹಮಾನ್ ಶೇಖ್ ಹಸನ್ ಸೇರಿ ಸರ್ಕಾರಿ ಭೂಮಿ ಕಬಳಿಕೆ ವಿರುದ್ಧ ಬೆಂಗಳೂರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಈ ದೂರು ಹಿಂಪಡೆಯುವoತೆ ರಿಯಲ್ ಎಸ್ಟೇಟ್ ಉದ್ಯಮಿಯೂ ಆದ ಕಾಂಗ್ರೆಸ್ ಮುಖಂಡ ಶ್ರೀನಿವಾಸ ಭಟ್ಟ ಧಾತ್ರಿ ಹಾಗೂ ಸಹಚರರು ಒತ್ತಡ ಹಾಕಿದ ಬಗ್ಗೆ ಅವರು ಇದೀಗ ತಹಶೀಲ್ದಾರ್ ಕಚೇರಿಗೆ ದೂರಿ, ರಕ್ಷಣೆ ಕೋರಿದ್ದಾರೆ.
`ಶ್ರೀನಿವಾಸ ಭಟ್ಟ ಅವರ ಜೊತೆ ರಾಮಚಂದ್ರ ಶೇಟ್, ಗೋಪಾಲಕೃಷ್ಣ ಭಟ್ಟ, ರವಿ ದೇವಾಡಿಗ, ದೀಪಕ ನಾಯ್ಕ ತಮ್ಮ ಮೇಲೆ ಹಲ್ಲೆ ಮಾಡುವ ಸಾಧ್ಯತೆಗಳಿದೆ. ಟಿಪ್ಪರ್ ವಾಹನ ಹಾಯಿಸಿ ನಿಮ್ಮನ್ನು ಮುಗಿಸುತ್ತೇವೆ’ ಎಂದು ಅನೇಕ ಬಾರಿ ಹೆದರಿಸಿದ್ದಾರೆ’ ಎಂದವರು ದೂರಿದ್ದಾರೆ. `ನ 28ರಂದು ಕೋರ್ಟ ಎದುರು ಸಿಕ್ಕ ಶ್ರೀನಿವಾಸ ಭಟ್ಟ ಧಾತ್ರಿ ಅವರು ನ್ಯಾಯಲಯದಲ್ಲಿನ ಕೇಸ್ ಹಿಂಪಡೆಯದೇ ಇದ್ದರೆ ಅವರೆಲ್ಲರೂ ನಿಮ್ಮ ವಿರುದ್ಧ ಸುಳ್ಳು ಕೇಸ್ ಹಾಕುತ್ತಾರೆ’ ಎಂದು ಬೆದರಿಸಿದ ಬಗ್ಗೆ ಆರೋಪಿಸಿದ್ದಾರೆ.
`ಈ ಬೆದರಿಕೆಯಿಂದ ತಮಗೆ ನೋವಾಗಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ನಮಗೆ ಅಗತ್ಯ ರಕ್ಷಣೆ ನೀಡಿ’ ಎಂದು ಮಂಜುನಾಥ ಹೆಗಡೆ ಹಾಗೂ ಅಬ್ದುಲ್ ರಹಮಾನ್ ಶೇಖ್ ಹಸನ್ ತಾಲೂಕಾಡಳಿತಕ್ಕೆ ಪತ್ರ ನೀಡಿದ್ದಾರೆ.




