ಯಲ್ಲಾಪುರ: ಮಾಗೋಡು ರಸ್ತೆಯಲ್ಲಿ ಚಲಿಸುತ್ತಿದ್ದ ಸ್ಕೂಟಿಗೆ ದಿಢೀರ್ ಆಗಿ ಬೆಂಕಿ ತಗುಲಿದೆ. ಸ್ಕೂಟಿ ಸಂಪೂರ್ಣ ಸುಟ್ಟು ಕರಕಲಾಗಿದೆ.
ನಂದೂಳ್ಳಿಯ ಸುರೇಶ ನಾಯ್ಕ ಅವರಿಗೆ ಸೇರಿದ ಸ್ಕೂಟಿ ಇದಾಗಿದೆ. ಅವರು ಶುಕ್ರವಾರ ಯಲ್ಲಾಪುರದಿಂದ ಮಾಗೋಡು ಮಾರ್ಗವಾಗಿ ಸಂಚರಿಸುತ್ತಿದ್ದಾಗ ಸ್ಕೂಟಿಗೆ ಬೆಂಕಿ ತಗುಲಿದೆ. ಕ್ಷಣಮಾತ್ರದಲ್ಲಿ ಬೆಂಕಿ ಪೂರ್ತಿ ವಾಹನವನ್ನು ಆವರಿಸಿದೆ. ಇದರಿಂದ ಬೆಚ್ಚಿದ ಸುರೇಶ ನಾಯ್ಕ ಅವರು ಸುಟ್ಟ ಸ್ಕೂಟಿಯನ್ನು ಅಲ್ಲಿಯೇ ಬಿಟ್ಟು ತೆರಳಿದ್ದಾರೆ.
ಪ್ರಸ್ತುತ ಕವಡಿಕೆರೆ ಬಸ್ ನಿಲ್ದಾಣದ ಬಳಿ ಈ ಸ್ಕೂಟಿ ಸುಟ್ಟ ಸ್ಥಿತಿಯಲ್ಲಿ ಕಂಡು ಬಂದಿದೆ. ಸ್ಕೂಟಿಯ ನೋಂದಣಿ ಸಂಖ್ಯೆ ಆಧಾರದಲ್ಲಿ ಮಾಲಕರನ್ನು ಪತ್ತೆ ಮಾಡಿದ ಪೊಲೀಸ್ ಸಿಬ್ಬಂದಿ ಬಸವರಾಜ ಹಗರಿ ಅವರು ಸ್ಕೂಟಿ ಮಾಲಕ ಸುರೇಶ ನಾಯ್ಕ ಅವರಿಗಾಗಿ ಹುಡುಕಾಟ ನಡೆಸಿದರು. ಆದರೆ, ಮನೆಯಲ್ಲಿ ಇರಲಿಲ್ಲ
ಈ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯುವುದಕ್ಕಾಗಿ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. `ಪೆಟ್ರೋಲ್ ಇಂಜಿನ್ ಹೊಂದಿದ ಟಿವಿಎಸ್ ಜುಪಿಟರ್ ಸ್ಕೂಟಿ ಇದಾಗಿದೆ. ಮಾಲಕರ ಬಳಿ ವಿವರ ಪಡೆದ ನಂತರವೇ ಅವಘಡಕ್ಕೆ ನಿಖರ ಕಾರಣ ಗೊತ್ತಾಗಲಿದೆ’ ಎಂದು ಪೊಲೀಸರು ತಿಳಿಸಿದರು.




