ರಾಜ್ಯದ ಏಳು ಜಿಲ್ಲೆಗಳಲ್ಲಿ ಹರಡಿಕೊಂಡಿರುವ ದನಗರ ಗೌಳಿ ಸಮುದಾಯದವರು ಕಬ್ಬಡಿ ಆಟಕ್ಕಾಗಿ ಒಂದಾಗುತ್ತಿದ್ದಾರೆ. 10 ಸಾವಿರಕ್ಕೂ ಅಧಿಕ ಜನರಿಗೆ ಸಾಕ್ಷಿಯಾಗಿ ರಾಜ್ಯಮಟ್ಟದ ಕಬ್ಬಡ್ಡಿ ಪಂದ್ಯಾವಳಿ ಸಂಘಟನೆಗೆ ವೇದಿಕೆ ಸಿದ್ಧವಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ದನಗರ ಗೌಳಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಕಳೆದ ವರ್ಷ ದಾಂಡೇಲಿಯಲ್ಲಿ ರಾಜ್ಯಮಟ್ಟದ ಕಬ್ಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ಬಾರಿ ಯಲ್ಲಾಪುರ ತಾಲೂಕಿನ ಕಿರವತ್ತಿಯಲ್ಲಿ ಈ ಸ್ಪರ್ಧೆ ನಡೆಯಲಿದೆ. ಕ್ರೀಡಾಸ್ಪರ್ಧಿಗಳಿಗೆ ಉತ್ತೇಜನ, ಸಮುದಾಯ ಸಂಘಟನೆ ಉದ್ದೇಶದಿಂದ ದನಗರ ಗೌಳಿ ಸಮುದಾಯದವರು ಪ್ರತಿ ವರ್ಷ ಮೂರು ದಿನಗಳ ಕಾಲ ರಾಜ್ಯಮಟ್ಟದ ಕಬ್ಬಡ್ಡಿ ಸ್ಪರ್ಧೆ ಆಯೋಜಿಸುತ್ತಿದ್ದಾರೆ.
ಶಿವಮೊಗ್ಗ, ಉಡುಪಿ, ದಾವಣಗೆರೆ, ಚಿಕ್ಕಮಂಗಳೂರು, ಉತ್ತರ ಕನ್ನಡ, ಧಾರವಾಡ, ಭದ್ರಾವತಿ, ಬೆಳಗಾವಿ ಭಾಗದ ಕ್ರೀಡಾಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಕಳೆದ ವರ್ಷ 8 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಈ ಬಾರಿ 10 ತಂಡದವರು ಭಾಗವಹಿಸಲಿದ್ದಾರೆ. ಪ್ರತಿ ತಂಡದಲ್ಲಿಯೂ 12 ಆಟಗಾರರಿದ್ದು ಒಗ್ಗಟ್ಟಿನಿಂದ ಶಕ್ತಿ ಪ್ರದರ್ಶನ ನೀಡಲಿದ್ದಾರೆ.
ಅಂಕದ ಹರಾಜು ಮೂಲಕ ಸ್ಪರ್ಧಿಯ ಆಯ್ಕೆ
ಶನಿವಾರ ಕಿರವತ್ತಿಯಲ್ಲಿ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಿತು. ಹಳಿಯಾಳ, ಅಂಬಿಕಾನಗರ, ದಾಂಡೇಲಿ, ಮುಂಡಗೋಡು ಹಾಗೂ ಯಲ್ಲಾಪುರ ಭಾಗದಿಂದ ತಂಡದ ಮಾಲಕರು ಆಗಮಿಸಿದ್ದರು. ತಂಡದ ಮಾಲಕರು ಹರಾಜಿನ ಮೂಲಕ ತಮ್ಮ ನೆಚ್ಚಿನ ಆಟಗಾರರನ್ನು ಪಡೆದರು. ಪ್ರತಿ ತಂಡದ ಮಾಲಕರಿಗೂ 300 ಅಂಕ ನೀಡಲಾಗಿದ್ದು, ತಮ್ಮ ಇಷ್ಟದ ಸ್ಪರ್ಧಿಗಳಿಗೆ ಹೆಚ್ಚಿನ ಅಂಕಗಳನ್ನು ಒಡ್ಡುವ ಮೂಲಕ ಅವರನ್ನು ತಂಡಕ್ಕೆ ಬರಮಾಡಿಕೊಂಡರು.
ರಾಜ್ಯ ದನಗರ ಗೌಳಿ ಪ್ರೋ ಕಬ್ಬಡ್ಡಿ ಸೀಸನ್ – 2 ಹಲವರು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಲು ಕಬ್ಬಡ್ಡಿ ತಂಡದವರು ನಿರಂತರ ಅಭ್ಯಾಸ ಮಾಡುತ್ತಿದ್ದಾರೆ. ಡಿಸೆಂಬರ್ 2ನೇ ವಾರದಲ್ಲಿ ಮೂರು ದಿನಗಳ ಕಾಲ ಈ ಕಬ್ಬಡ್ಡಿ ಪಂದ್ಯಾವಳಿ ನಡೆಯಲಿದೆ. ಅಚ್ಚುಕಟ್ಟಾದ ಕಬ್ಬಡ್ಡಿ ಸ್ಪರ್ಧೆ ಆಯೋಜನೆಗೆ ಸಮಿತಿಯವರು ಶ್ರಮಿಸುತ್ತಿದ್ದು, ಶೀಘ್ರದಲ್ಲಿಯೇ ಸ್ಪರ್ಧೆಯ ದಿನಾಂಕ ಪ್ರಕಟಿಸಲಿದ್ದಾರೆ.




