ಕುಮಟಾ: ಶಾಸಕ ದಿನಕರ ಶೆಟ್ಟಿ ಅವರ ಮನೆಯಲ್ಲಿ 80 ಸಾವಿರ ರೂ ಹಣ ಕಳ್ಳತನವಾಗಿರುವುದು ಸತ್ಯ. ಆದರೆ, ಕಾಸು ಕದ್ದ ಕಳ್ಳಿಯನ್ನು ಕ್ಷಮಿಸುವ ಮೂಲಕ ಅವರು ಉದಾರತನ ತೋರಿದ್ದಾರೆ.
ಮಹಿಳೆಯೊಬ್ಬರು ಶಾಸಕ ದಿನಕರ ಶೆಟ್ಟಿ ಅವರ ಮನೆಗೆ ಆಗಮಿಸಿದ್ದರು. ಆರ್ಥಿಕ ಸಂಕಷ್ಟವಿರುವ ಕಾರಣ ನೆರವು ನೀಡುವಂತೆ ಮನವಿ ಮಾಡಿದ್ದರು. ಆಗ ಶಾಸಕರು 10 ಸಾವಿರ ರೂ ಕೊಟ್ಟು ಕಳುಹಿಸಿವಂತೆ ಆಪ್ತ ಕಾರ್ಯದರ್ಶಿಗೆ ಸೂಚಿಸಿದ್ದರು. ಅದರ ಪ್ರಕಾರ ಅವರ ಆಪ್ತ ಕಾರ್ಯದರ್ಶಿ 10 ಸಾವಿರ ರೂ ಹಣ ನೀಡಿದ್ದು, ಹಣದ ಪೆಂಡೆಯನ್ನು ತಮ್ಮ ಜೊತೆಯಲ್ಲಿಯೇ ಇರಿಸಿಕೊಂಡಿದ್ದರು.
ಇದೇ ವೇಳೆ ಶಾಸಕರ ಸಂಬoಧಿ ನಿಧನರಾದ ಸುದ್ದಿ ಬಂದಿದ್ದು, ದಿನಕರ ಶೆಟ್ಟಿ ಅವರು ಅಂತಿಮ ದರ್ಶನಕ್ಕಾಗಿ ಅಹ್ಮದಾಬಾದಿಗೆ ಹೋಗುವವರಿದ್ದರು. ಆಪ್ತರ ನಿಧನದ ಸುದ್ದಿಯಿಂದ ದಿನಕರ ಶೆಟ್ಟಿ ಆಘಾತಕ್ಕೆ ಒಳಗಾಗಿದ್ದರು. ತಮ್ಮ ಪ್ರಯಾಣ ವೆಚ್ಚಕ್ಕಾಗಿ ಆಪ್ತ ಕಾರ್ಯದರ್ಶಿ ಬಳಿಯಿದ್ದ ಹಣದ ಬಗ್ಗೆ ಪ್ರಶ್ನಿಸಿದಾಗ ಅದು ಕಣ್ಮರೆಯಾಗಿರುವುದು ಗಮನಕ್ಕೆ ಬಂದಿತು. ನೆರವು ಕೇಳಲು ಬಂದ ಮಹಿಳೆ ಅದನ್ನು ಎಗರಿಸಿರುವುದು ನಂತರ ಗೊತ್ತಾಯಿತು.
ಗೋವಾ ಮೂಲಕ ವಿಮಾನ ಏರಿ ಅಹ್ಮದಾಬಾದಿಗೆ ಹೋಗಬೇಕಿದ್ದ ದಿನಕರ ಶೆಟ್ಟಿ ಹಣದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ತಮ್ಮ ಅಗತ್ಯಕ್ಕಾಗಿ ತೆಗೆದಿರಿಸಿದ್ದ ಹಣ ಕಣ್ಮರೆಯಾಗಿದ್ದರಿಂದ ಅವರು ಸಮಸ್ಯೆ ಅನುಭವಿಸಿದರು. ಅದಾಗಿಯೂ, ಸಾವನಪ್ಪಿದ ಸಂಬoಧಿಕರ ಕುಟುಂಬಕ್ಕೆ ಸಾಂತ್ವಾನ ಹೇಳುವುದಕ್ಕಾಗಿ ವಿಮಾನ ಏರಿ ಅಹ್ಮದಾಬಾದಿನ ಕಡೆ ಹೊರಟರು.
ಇನ್ನೂ ಹಣ ಎಗರಿಸಿದ ಮಹಿಳೆಯ ಬಗ್ಗೆ ಶಾಸಕ ದಿನಕರ ಶೆಟ್ಟಿ ಅವರ ಆಪ್ತ ಕಾರ್ಯದರ್ಶಿ ವಿಚಾರಣೆ ನಡೆಸಿದರೂ, ಆಕೆಯ ವಿರುದ್ಧ ಪೊಲೀಸ್ ದೂರು ನೀಡದಂತೆ ದಿನಕರ ಶೆಟ್ಟಿ ಸೂಚಿಸಿದರು. `ಕಷ್ಟದಲ್ಲಿದ್ದ ಮಹಿಳೆ ತನಗೆ ನೀಡಿದ ಹಣ ಎಂದು ಭಾವಿಸಿ ಅಲ್ಲಿದ್ದ ಹಣವನ್ನು ಪಡೆದಿರಬಹುದು. ನೊಂದವರಿಗೆ ನೆರವು ನೀಡುವುದು ನಮ್ಮ ಕರ್ತವ್ಯ. ಅದಕ್ಕೆ ರೆಕ್ಕೆ-ಪುಕ್ಕ ಕಟ್ಟಿ ದೊಡ್ಡದು ಮಾಡುವುದು ಬೇಡ’ ಎಂದು ಶಾಸಕ ದಿನಕರ ಶೆಟ್ಟಿ ಪ್ರತಿಕ್ರಿಯಿಸಿದರು.




