ಕೇವಲ ಭಾರತ ಮತ್ತು ಪಾಕಿಸ್ತಾನಕ್ಕಷ್ಟೇ ಸೀಮಿತವಾಗಿದ್ದು ಅತಿಹೆಚ್ಚು ತೂಕದ ಹಾರುವ ಹಕ್ಕಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಭಾರತದ `ಅಸ್ಟ್ರಿಚ್’ ಎಂದು ಹೆಸರು ಪಡೆದಿದ್ದ ಗ್ರೇಟ್ ಇಂಡಿಯನ್ ಬಸ್ಟರ್ಡ್ ಯಾನೆ ಎರ್ಲಡ್ಡು ಉರ್ಫ್ ದೊರೆವಾಯನ ಹಕ್ಕಿಗಳು ಭೂಮಿಯಲ್ಲಿ ತಮ್ಮ ಕೊನೆಯ ದಿನಗಳನ್ನು ಎಣಿಸುತ್ತಿವೆ.
ಹಿಂದೊಮ್ಮೆ ಭಾರತದೆಲ್ಲೆಡೆ ಅದರಲ್ಲೂ ವಿಶೇಷವಾಗಿ ಕರ್ನಾಟಕ, ಹರ್ಯಾಣ, ರಾಜಸ್ಥಾನ, ಪಂಜಾಬ, ಮಹಾರಾಷ್ಟ್ರ, ಗುಜರಾತ, ಆಂಧ್ರ ರಾಜ್ಯಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತಿದ್ದವು. ಒಂದು ಮೀಟರಿನಷ್ಟು ನೀಳಕಾಯ ಹೊಂದಿದ್ದು 15 ತೂಗುವ ಈ ಪಕ್ಷಿಗೆ ಅದರ ಸೌಂದರ್ಯದ ಜೊತೆಗೆ ತನ್ನ ಮಾಂಸದ ರುಚಿಯೇ ಮುಳುವಾಗಿದ್ದುದು ದುರಂತ. ಮುಘಲ್ಲರ ದೊರೆ ಬಾಬರ್’ನಂತೂ ಈ ಹಕ್ಕಿಯ ಮಾಂಸದ ದೊಡ್ಡ ಅಭಿಮಾನಿ. ಖರ್ಚಿಲ್ ಎಂದು ಕರೆಯಲ್ಪಡುತ್ತಿದ ಈ ಹಕ್ಕಿಯ ಮಾಂಸದ ಖಾದ್ಯ ಆತನ ಊಟದ ತಟ್ಟೆಯಲ್ಲಿ ಯಾವಾಗಲೂ ಇರಬೇಕಿತ್ತು. ಬ್ರಿಟೀಷರ ಆಳ್ವಿಕೆಯಲ್ಲಿ ಅವರ ನೆಚ್ಚಿನ ಹಕ್ಕಿಯನ್ನು ಜೀವಂತ ಹಿಡಿಯುವ ಕ್ರೀಡೆಗೆ ಹೆಚ್ಚಾಗಿ ಆಯ್ಕೆಯಾಗುತ್ತಿದ್ದುದು ಈ ಎರ್ಲಡ್ಡೇ. ಇಷ್ಟು ಸಾಲದೆಂಬುದಕ್ಕೆ ಈ ಪಕ್ಷಿಯ ಮಾಂಸವು ಔಷಧೀಯ ಗುಣಗಳನ್ನು ಹೊಂದಿದೆ ಎಂಬ ನಂಬಿಕೆಯ ಪರಿಣಾಮ ಭಾರತದಲ್ಲಿ ದೊರೆವಾಯನ ಹಕ್ಕಿಯ ಸಂಖ್ಯೆ ವ್ಯಾಪಕವಾಗಿ ಕುಸಿಯಿತು.
ಕ್ರಿಮಿ-ಕೀಟಗಳು, ಕಾಳು, ಸರಿಸ್ರಪಗಳು ಎರ್ಲಡ್ಡುಗಳ ಪ್ರಮುಖ ಆಹಾರ. ಹೀಗಾಗಿ ಕುರುಚಲು ಕಾಡಿಗೆ ಹೊಂದಿಕೊ0ಡಿರುವ ಒಣ ಬಯಲು ಪ್ರದೇಶವನ್ನು ಈ ಪಕ್ಷಿಗಳು ತಮ್ಮ ವಾಸಸ್ಥಾನವನ್ನಾಗಿ ಆಯ್ದುಕೊಳ್ಳುತ್ತವೆ. ಕೃಷ್ಣಮೃಗಗಳೂ ಇಂಥಹುದೇ ಪ್ರದೇಶವನ್ನು ಇಷ್ಟಪಡುವುದರಿಂದ ಅವುಗಳು ಇದ್ದಲ್ಲಿ ಎರ್ಲಡ್ಡುಗಳೂ ಇರುತ್ತವೆ. ಕರ್ನಾಟಕದ ರಾಣೆಬೆನ್ನೂರು ಇದಕ್ಕೊಂದು ಉತ್ತಮ ಉದಾಹರಣೆ. ಕಾಲಕ್ರಮೇಣ ಇಂತಹ ಪ್ರದೇಶಗಳು ಒಂದೇ ಕ್ರಷಿಕ್ಷೇತ್ರವಾಗಿ ಅಥವಾ ಸೌರವಿದ್ಯುತ್ನಂಥ ಅಸಾಂಪ್ರದಾಯಿಕ ವಿದ್ಯುತ್ ಉತ್ಪಾದನೆಗೆ ಬಳಕೆಯಾದವು. ಇದರಿಂದ ಈ ಪಕ್ಷಿಗಳ ಆವಾಸಸ್ಥಾನ ನಾಶವಾಯಿತು. ವಿದ್ಯುತ್ ಉತ್ಪಾದನೆಗೆ ನಿರ್ಮಾಣವಾದ ಯೋಜನೆಗಳಿಂದ ವಿದ್ಯುತ್ತನ್ನು ಹೊತ್ತು ಸಾಗುವ ತಂತಿಗಳನ್ನು ಮಂದ ದೃಷ್ಟಿಯ ಮತ್ತು ಭಾರಿ ತೂಕವನ್ನು ಹೊತ್ತುಕೊಂಡು ಹೆಚ್ಚು ಎತ್ತರಕ್ಕೆ ಹಾರಲಾಗದ ಎರ್ಲಡ್ಡುಗಳು ಸ್ಪರ್ಷಿಸಿ ಸಾಯುವ ಪ್ರಕರಣಗಳೂ ಹೆಚ್ಚಿದವು. ಇದಕ್ಕೆಲ್ಲ ಪೂರಕವೆಂಬAತೇ ವರ್ಷಕ್ಕೊಂದೇ ಮೊಟ್ಟೆಯಿಡುವ ಹೆಣ್ಣು ಹಕ್ಕಿಯ ಕಡಿಮೆ ಫಲವತ್ತತೆಯ ಕಾರಣ ಭಾರತದಲ್ಲಿ 1969 ರಲ್ಲಿ 1260ರ ಸಂಖ್ಯೆಯಲ್ಲಿದ್ದ ಈ ಪಕ್ಷಿಗಳು 2018ರಲ್ಲಿ 150ಕ್ಕೆ ಕುಸಿದಿವೆ. ಪಾಕಿಸ್ತಾನದಲ್ಲಂತೂ ಇವುಗಳ ಕುರುಹು ಇಲ್ಲ.
ಎರ್ಲಡ್ಡುಗಳ ಸಂಖ್ಯೆ ಕುಸಿಯುತ್ತಿರುವುದನ್ನು ಗಮನಿಸಿದ್ದ ಖ್ಯಾತ ಪಕ್ಷಿತಜ್ಜ ಡಾ. ಸಲೀಂ ಅಲಿಯವರು ಸ್ವಾತಂತ್ರ್ಯಾನoತರ ಭಾರತದ ರಾಷ್ಟ್ರಪಕ್ಷಿಯನ್ನು ಆಯ್ಕೆಮಾಡುವ ಸಂದರ್ಭದಲ್ಲಿ ಎರ್ಲಡ್ಡುವಿನ ಆಯ್ಕೆಯನ್ನು ಬಲವಾಗಿ ಪ್ರತಿಪಾದಿಸಿದ್ದರು. ಈ ಮೂಲಕವಾದರೂ ಭಾರತದ ಹೆಮ್ಮೆಯಾಗಿರುವ ಈ ಪಕ್ಷಿಯ ಕುರಿತು ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸಿ ಉಳಿಸಿಕೊಳ್ಳುವ ಕಾರ್ಯಕ್ಕೆ ಬಲಸಿಗುವುದೆಂಬ ಆಸೆ ಅವರದಾಗಿತ್ತು. ಆದರೆ, ಅದ್ಯಾಕೋ ಈ ಪಕ್ಷಿಯ ನಸೀಬು ಸರಿ ಇರಲಿಲ್ಲ. ನವಿಲು ಎರ್ಲಡ್ಡನ್ನು ಹಿಂದಿಕ್ಕಿ ರಾಷ್ಟ್ರಪಕ್ಷಿಯಾಗಿ ಆಯ್ಕೆಯಾಗುವುದಕ್ಕೆ ಎರ್ಲಡ್ಡುವಿನ ಆಂಗ್ಲ ಹೆಸರಾದ ಇಂಡಿಯನ್ ಬಸ್ಟರ್ಡ್ ಅಪಭ್ರಂಶವಾಗಿ ಬೇರೆಯದೇ ಅರ್ಥಕೊಡುವ ಸಾಧ್ಯತೆಯೇ ಪ್ರಮುಖವಾಗಿತ್ತು ಎನ್ನುವ ಮಾತು ಸಹ ಆಗ ಕೇಳಿಬಂದಿತ್ತು.
ಒಂದೆಡೆ ಭಾರತದ ಅಸ್ಟ್ರಿಚ್ ನ ಸಂಖ್ಯೆ ಕುಸಿಯುತ್ತ ಬರುತ್ತಿದ್ದರೂ ಸರ್ಕಾರಗಳು ಈ ಕುರಿತು ನಿರ್ಲಿಪ್ತವಾಗಿರುವುದನ್ನು ಕಂಡು ಪಕ್ಷಿಪ್ರಿಯರು ಫೀಲ್ಡಿಗಿಳಿದು ಆಡಳಿತದ ಮೇಲೆ ಒತ್ತಡ ತಂದಿದ್ದರ ಪರಿಣಾಮವಾಗಿ ಎರ್ಲಡ್ಡು ಬಚಾವ್ ಯೋಜನೆ ಶುರುವಾಯಿತು. ಭಾರತದಲ್ಲಿ ಕೊನೆಯ ಎರ್ಲಡ್ಡುವೀನ ಗುಂಪು ರಾಜಸ್ಥಾನದಲ್ಲಿರುವುದನ್ನು ಮನಗಂಡ ಅಲ್ಲಿನ ಸರ್ಕಾರ 2013 ರಲ್ಲಿ ಎರ್ಲಡ್ಡುವನ್ನು ರಾಜ್ಯಪಕ್ಷಿಯಾಗಿ ಘೋಷಿಸಿ ಅವುಗಳಿರುವ ಪ್ರದೇಶವನ್ನು ಬೇಲಿಹಾಕಿ ಸಾರ್ವಜನಿಕರ ಪ್ರವೇಶವನ್ನು ನಿರ್ಭಂದಿಸುವುದರ ಜೊತೆಗೆ ಸ್ಥಳೀಯರಲ್ಲಿ ಪಕ್ಷಿಯ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಿತು. ಸಂರಕ್ಷಣಾ ಪ್ರದೇಶದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳನ್ನು ಸ್ಪರ್ಷಿಸಿ ಈ ಪಕ್ಷಿಗಳು ಪ್ರಾಣಬಿಡುತ್ತಿರುವುದನ್ನು ಗಮನಿಸಿ 2019 ರಲ್ಲಿ ಸುಪ್ರೀಂ ಕೋರ್ಟ್ ರಾಜಸ್ಥಾನ ಮತ್ತು ಗುಜರಾತನ್ನು ಹೊಂದಿಕೊAಡಿರುವ ಸುಮಾರು ಎಂಭತ್ತು ಸಾವಿರ ಚದರ ಕಿಮಿ ವಿಸ್ತೀರ್ಣದ ಪ್ರದೇಶವನ್ನು ಗುರುತಿಸಿ ಅಲ್ಲಿ ವಿದ್ಯುತ್ ತಂತಿಗಳನ್ನು ಅಳವಡಿಸುವುದನ್ನು ನಿಷೇಧಿಸಿತು. ಇಲ್ಲಿ ತೊಂದರೆಯೆAದರೆ ಈ ಪ್ರದೇಶವು ಸೌರ ವಿದ್ಯುತ ಉತ್ಪಾದನೆಗೆ ಹೇಳಿಮಾಡಿಸಿದ ಜಾಗವಾಗಿದ್ದು 2070 ರೊಳಗೆ ಭಾರತದ ನಿವ್ವಳ ಶೂನ್ಯ ಕಾರ್ಬನ್ ಉತ್ಪಾದನೆಯ ಗುರಿಮುಟ್ಟಲು ಹಾಕಿಕೊಂಡಿರುವ ಕ್ರಿಯಾಯೋಜನೆಗನುಣವಾಗಿ ಸೌರಶಕ್ತಿಯೂ ಸೇರಿದಂತೆ ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸಲು ಹಾಕಿಕೊಂಡಿರುವ ಗುರಿಗೆ ಮುಖ್ಯ ತೊಡರಾಗಿದೆ. ಹೀಗಾಗಿ 2019 ರ ಸುಪ್ರೀಂ ಕೋರ್ಟಿನ ಆದೇಶವನ್ನು ಬದಲಿಸುವಂತೇ ಸಲ್ಲಿಸಿದ ಅರ್ಜಿಗೆ ಕೆಲದಿನಗಳ ಹಿಂದೆ ಕೋರ್ಟು ಏಳು ಪರಿಣಿತರ ಸಮೀತಿಯನ್ನು ರಚಿಸಿ ಪರಿಸರ ಮತ್ತು ಪಕ್ಷಿ ಸಂರಕ್ಷಣೆಯನ್ನು ಹೇಗೆ ಜೊತೆಜೊತೆಯಲ್ಲಿ ಸಂಭಾಳಿಸಬಹುದೆAಬುದರ ಕುರಿತು ವರದಿ ಸಲ್ಲಿಸುವಂತೆ ಆದೇಶಿಸಿದೆ.
ಈ ಬೆಳವಣಿಗೆ ಬರುವ ದಿನಗಳಲ್ಲಿ ಈ ಸಂರಕ್ಷಿತ ಪ್ರದೇಶದಲ್ಲಿ ದೊಡ್ಡ ದೊಡ್ಡ ಸೌರ ವಿದ್ಯುತ್ ಘಟಕಗಳು ತಲೆಯೆತ್ತಿ ಎರ್ಲಡ್ಡುವಿನ ಪಾಲಿಗೆ ಮರಣಶಾಸನವಾಗುವುದೇ ಎಂಬ ಆತಂಕ ಪಕ್ಷಿಪ್ರಿಯರಲ್ಲಿ ಮನೆಮಾಡಿದೆ. ಹಾಗಾದಲ್ಲಿ ಸ್ವಾತಂತ್ರ್ಯಾನoತರ ಭಾರತದಿಂದ ಕಣ್ಮರೆಯಾದ ಮೊದಲ ಪಕ್ಷಿ ಎಂಬ ಕುಖ್ಯಾತಿಯೂ ಎರ್ಲಡ್ಡುವಿನದಾಗಲಿದೆ. ಅದಾಗದಿರಲಿ ಎಂದು ಆಶಿಸೋಣ.
– ಸುನೀಲ್ ಬಾರ್ಕೂರ್
——————————————
ಲೇಖಕರ ಬಗ್ಗೆ:
ಕೈಗಾದ ಅಣು ವಿದ್ಯುತ್ ನಿಗಮದ ಉದ್ಯೋಗಿ ಆಗಿರುವ ಸುನೀಲ್ ಬಾರ್ಕೂರು ಅವರು ಅತ್ಯಂತ ಕ್ರಿಯಾಶೀಲ ವ್ಯಕ್ತಿ. ಲೇಖಕ, ಅಂಕಣಕಾರ, ಹಾಡುಗಾರ, ಕಲೆ-ಸಾಹಿತ್ಯದ ಜೊತೆ ಉತ್ತಮ ಕ್ರಿಕೆಟ್ ಆಟಗಾರರು ಸಹ ಹೌದು. ಪಕ್ಷಿ ವೀಕ್ಷಣೆ, ಅಧ್ಯಯನ ಅವರ ಪ್ರಮುಖ ಹವ್ಯಾಸಗಳಲ್ಲಿ ಒಂದು. ವಿಜಯವಾಣಿ, ವಿಜಯ ಕರ್ನಾಟಕ ಸೇರಿ ವಿವಿಧ ಪತ್ರಿಕೆಗಳಿಗೆ ಅವರ ಅಂಕಣ ಅಚ್ಚುಮೆಚ್ಚು. ನಾಡಿನ ಹಲವು ಪತ್ರಿಕೆಗಳಲ್ಲಿ ಅವರ ನಿಲುವು ಪ್ರಕಟವಾಗಿದ್ದು, ಇನ್ನೂ ಮುಂದೆ ನಮ್ಮಲ್ಲಿ ಸಹ ಅವರ ಹಸ್ತಾಕ್ಷರ ಲಭ್ಯ.
ಸಂ
Discussion about this post