ಕುಮಟಾ: ಸಂಸ್ಕಾರಯುತ ಶಿಕ್ಷಣದ ಮೂಲಕ ಜಿಲ್ಲೆಯ ಪ್ರತಿಭೆಗಳನ್ನು ರಾಜ್ಯ-ರಾಷ್ಟ್ರಮಟ್ಟದ ಸಾಧನೆಗೆ ಪ್ರೇರೇಪಿಸುತ್ತಿರುವ ಮಂಗಳೂರಿನ ವಿಧಾತ್ರಿ ಅಕಾಡೆಮಿ ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಜೊತೆ ಕೈ ಜೋಡಿಸಿ ನಾಲ್ಕು ವರ್ಷ ಕಳೆದಿದೆ. ಐದನೇ ವರ್ಷದ ಸಡಗರದಲ್ಲಿರುವ ಈ ಸಂಸ್ಥೆ ಇದೀಗ `ಪ್ರತಿಭಾ ಸ್ಪಂದನ’ ಕಾರ್ಯಕ್ರಮಕ್ಕೆ ಅಣಿಯಾಗಿದೆ. ಆ ಮೂಲಕ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಯೋಜನೆಯೊಂದನ್ನು ಸಂಸ್ಥೆ ಪರಿಚಯಿಸಿದೆ.
ಭಾರತೀಯ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸರಸ್ವತಿ ಪಿಯು ಕಾಲೇಜು ಮುಂಚೂಣಿಯಲ್ಲಿದೆ. ಶಿಕ್ಷಣ, ಸಾಂಸ್ಕೃತಿಕ, ಕ್ರೀಡೆ ಜೊತೆ ಕಲಿಯುವ ಉತ್ಸಾಹವಿರುವ ಬಡ ಪ್ರತಿಭಾನ್ವಿತ 10 ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಸಂಸ್ಥೆ ಮುಂದಾಗಿದೆ. ಇದರೊಂದಿಗೆ 15 ಪ್ರತಿಭಾನ್ವಿತರಿಗೆ ಶಿಷ್ಯ ವೇತನ ನೀಡುವ ಬಗ್ಗೆಯೂ ವಿಧಾತ್ರಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ ಘೋಷಿಸಿದ್ದಾರೆ.
`ಪ್ರತಿಭಾ ಸ್ಪಂದನ ಯೋಜನೆ ಅಡಿ ಶೈಕ್ಷಣಿಕವಾಗಿ ಸಾಧನೆ ಮಾಡಿದ 6 ವಿದ್ಯಾರ್ಥಿಗಳ ಜೊತೆ ಸಾಂಸ್ಕೃತಿಕ ಸಾಧನೆ ಮಾಡಿದ 2 ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಬ್ಬರಿಗೆ ಉಚಿತ ಶಿಕ್ಷಣ ಸಿಗಲಿದೆ. ಅತಿ ಹೆಚ್ಚು ಅಂಕಪಡೆದು ಸಾಧನೆ ಮಾಡಿದ 15 ವಿದ್ಯಾರ್ಥಿಗಳಿಗೆ ಯಾವುದೇ ನಿರ್ಭಂಧಗಳನ್ನು ವಿಧಿಸದೇ ಶಿಷ್ಯ ವೇತನ ಒದಗಿಸಲು ಈ ಸಂಸ್ಥೆ ಮುಂದಾಗಿದೆ. ಎಲ್ಲಾ ಸ್ಥರ ಹಾಗೂ ಎಲ್ಲಾ ವರ್ಗದವರು ಸಹ ಈ ಯೋಜನೆಗೆ ಹೆಸರು ನೊಂದಾಯಿಸಿ, ಲಿಖಿತ ಪರೀಕ್ಷೆ ಎದುರಿಸಲು ಮುಕ್ತ ಅವಕಾಶವಿದೆ’ ಎಂದು ಗುರುರಾಜ ಶೆಟ್ಟಿ ವಿವರಿಸಿದರು.

`ಹೆಸರು ನೊಂದಾಯಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಜನವರಿ 12ರ ಬೆಳಗ್ಗೆ 11.30ಕ್ಕೆ ಕುಮಟಾದ ಸರಸ್ವತಿ ಪಿ.ಯು ಕಾಲೇಜಿನಲ್ಲಿ ಸಂದರ್ಶನ ಹಾಗೂ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗೆ ಬರುವವರಿಗೆ ಕುಮಟಾ ಬಸ್ ನಿಲ್ದಾಣದಿಂದ ಕಾಲೇಜಿನವರೆಗೂ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಮಧ್ಯಾಹ್ನ ಊಟವನ್ನು ಸಹ ಸಂಸ್ಥೆಯೇ ನೀಡುತ್ತದೆ. ಪರೀಕ್ಷೆ ಎದುರಿಸಿದ ನಂತರ ಉಚಿತ ಶಿಕ್ಷಣಕ್ಕೆ ಆಯ್ಕೆಯಾದವರ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ’ ಎಂದು ಪ್ರಾಚಾರ್ಯ ಕಿರಣ ಭಟ್ಟ ಮಾಹಿತಿ ನೀಡಿದರು.
ಇನ್ನೂ `ಶಿಷ್ಯವೇತನ ಬಯಸುವ ವಿದ್ಯಾರ್ಥಿಗಳು ಸಹ ಲಿಖಿತ ಪರೀಕ್ಷೆ ಎದುರಿಸಬೇಕು. ಇದಕ್ಕಾಗಿ ಗೂಗಲ್ ಪಾರಂ ಹಂಚಿಕೆ ಮಾಡಲಾಗಿದ್ದು, ಇದರಲ್ಲಿ ಗಣಿತ ಹಾಗೂ ವಿಜ್ಞಾನ ವಿಷಯದ ಪ್ರಶ್ನೆಗಳಿರುತ್ತವೆ. 100 ಅಂಕದ ಪರೀಕ್ಷೆಯಲ್ಲಿ 50 ಅಂಕದ ಬಹು ಆಯ್ಕೆ ಹಾಗೂ ಉಳಿದ 50 ಅಂಕಕ್ಕೆ ವಿಸ್ತೃತ ಉತ್ತರ ಬರೆಯುವ ರೀತಿಯಲ್ಲಿ ಪ್ರಶ್ನೆ ಪತ್ರಿಕೆ ಸಂಯೋಜಿಸಲಾಗಿದೆ’ ಎಂದವರು ತಿಳಿಸಿದರು. ಉಪನ್ಯಾಸಕ ಚಿದಾನಂದ ಭಂಡಾರಿ ಅವರು ಈ ವೇಳೆ ಇದ್ದರು.
ಗೂಗಲ್ ಪಾರಂ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ: ಪ್ರತಿಭಾ ಸ್ಪಂದನ ಅರ್ಜಿ
ಆರ್ಥಿಕವಾಗಿ ಸಬಲರಲ್ಲದವರು ಪೂರಕ ದಾಖಲೆಗಳನ್ನು ಒದಗಿಸಬೇಕು. ಸಾಂಸ್ಕೃತಿಕ ಹಾಗೂ ಕ್ರೀಡಾ ಸಾಧಕರು ಅಗತ್ಯ ದಾಖಲೆ ಒದಗಿಸಬೇಕು. ಇದನ್ನು ಹೊರತುಪಡಿಸಿ ಯಾವುದೇ ಶಿಫಾರಸ್ಸುಗಳನ್ನು ಇಲ್ಲಿ ಪರಿಗಣಿಸುವುದಿಲ್ಲ.
ಇನ್ನೂ ಈ ವಿಷಯದ ಬಗ್ಗೆ ಗೊಂದಲವೇ? ಹಾಗಾದರೆ ಇಲ್ಲಿ ಫೋನ್ ಮಾಡಿ: 9972663855, 9972664155




