ಯಲ್ಲಾಪುರ: ಹುಲ್ಲೋರಮನೆ ದಾತ್ರಿ ನಗರ ವಸತಿ ಬಡಾವಣೆ ಬಳಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಮಂಜುನಾಥ ಹೆಗಡೆ ಪಟ್ಟಣ ಪಂಚಾಯತ ವಿರುದ್ಧ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು. ಉಪವಾಸ ಕುಳಿತ ಅವರನ್ನು ಅನೇಕರು ಮಾತನಾಡಿಸಿ ಸಮಸ್ಯೆ ಆಲಿಸಿದರು. ಕೊನೆಗೆ ಸ್ಥಳ ಪರಿಶೀಲನೆ ನಡೆಸಿದ ಪ ಪಂ ಅಧಿಕಾರಿಗಳು ಸಹ ಕುಡಿಯುವ ನೀರು ಪೂರೈಸುವ ಭರವಸೆ ನೀಡಿದರು.
ಈ ಪ್ರದೇಶದಲ್ಲಿ ಕಳೆದ ವರ್ಷ ಮಂಜುನಾಥ ಹೆಗಡೆ ಅವರು ಭೂಮಿ ಖರೀದಿಸಿದ್ದರು. ಪಟ್ಟಣ ಪಂಚಾಯತಗೆ ಅವರು ತೆರಿಗೆ ಪಾವತಿಸಿದರೂ ಮೂಲಭೂತ ಸೌಕರ್ಯವಾದ ನೀರು ಸಿಕ್ಕಿರಲಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ತಿಳಿಸಿದರೂ ಅಧಿಕಾರಿಗಳು ನೀರು ಕೊಟ್ಟಿರಲಿಲ್ಲ. ಈ ಹಿನ್ನಲೆ ಅವರು ಶನಿವಾರ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದರು. ಬೆಳಗ್ಗೆ ಬಂದ ಅಧಿಕಾರಿಗಳು ಮಂಜುನಾಥ ಹೆಗಡೆ ಅವರ ಮನ ಒಲೈಸುವ ಪ್ರಯತ್ನ ಮಾಡಿದರು. ಆದರೆ, ಅದಕ್ಕೆ ಅವರು ಒಪ್ಪಲಿಲ್ಲ. ಕುಡಿಯುವ ನೀರು ಪೂರೈಸಿದ ನಂತರವೇ ಉಪವಾಸ ಧರಣಿ ಕೈ ಬಿಡುವುದಾಗಿ ಪಟ್ಟು ಹಿಡಿದರು.
ಮಧ್ಯಾಹ್ನದ ವೇಳೆ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಕುಡಿಯುವ ನೀರು ಪೂರೈಕೆ ಬಗ್ಗೆ ಚರ್ಚಿಸಿದರು. ಕೊನೆಗೆ ಒಂದು ವಾರದ ಒಳಗೆ ಸಮಸ್ಯೆ ಬಗೆಹರಿಸಿಕೊಡುವ ಭರವಸೆ ನೀಡಿದರು. ಈ ಹಿನ್ನಲೆ ಅವರು ಶನಿವಾರ ಸಂಜೆ ತಮ್ಮ ಹೋರಾಟವನ್ನು ಹಿಂಪಡೆದರು. ಭರವಸೆ ಈಡೇರದೇ ಇದ್ದಲ್ಲಿ ಮತ್ತೆ ಹೋರಾಟ ಮುಂದುವರೆಸುವುದಾಗಿ ಅವರು ಎಚ್ಚರಿಸಿದ್ದಾರೆ.





