ಶಿರಸಿ: ವಿಚಾರಣೆಗೆ ಬಂದ ಪೊಲೀಸರ ಮೇಲೆ ಹಲ್ಲೆ ನಡೆಸಲುಕುಮ್ಮಕ್ಕು ನೀಡಿ ಪರಾರಿಯಾಗಿದ್ದ ಕಳ್ಳನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
2022ರ ಡಿಸೆಂಬರ್ 22ರಂದು ಶಿರಸಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಅನ್ವರ ಅಬ್ದುಲ್ ಭಾಷಾ ಎಂಬಾತನ ಮೇಲೆ ಅನುಮಾನ ಮೂಡಿತ್ತು. ಘಟನಾ ಸ್ಥಳದಲ್ಲಿನ ಬೆರಳಚ್ಚುಗಳು ಆತನಿಗೆ ಹೋಲಿಕೆಯಾಗುತ್ತಿದ್ದ ಕಾರಣ ಜನವರಿ 3ರಂದು ಆರ್ಟಿಓ ಕಚೇರಿ ಬಳಿಯ ಶಾಲ್ಮಲಾ ಬಡವಾಣೆಗೆ ಪೊಲೀಸರು ನುಗ್ಗಿದ್ದರು. ಮನೆಯಲ್ಲಿಯೇ ಇದ್ದ ಅನ್ವರ್ ಭಾಷಾ ಕುಟುಂಬ ಸದಸ್ಯರನ್ನು ಎತ್ತಿಕಟ್ಟಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ. ಜೊತೆಗೆ ಆತ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ.
ಅನ್ವರ್ ಭಾಷಾನ ರಕ್ಷಣೆಗಾಗಿ ಆತನ ಜೊತೆಯಿದ್ದ ಮುಬಾರಕ್ ಭಾಷಾ, ಆಬೀದ್ ಖಾನ್, ರಷೀದಾ ಶೇಖ್, ಅಪ್ರೀನ್ ಶೇಖ್, ರಫಿಯಾ ಶೇಖ್, ಅಮ್ರೀನ್ ಶೇಖ್ ಸೇರಿ ಪೊಲೀಸರ ಮೇಲೆ ಆಕ್ರಮಣ ನಡೆಸಿದ್ದರು. ಇದರಿಂದ ಪೊಲೀಸ್ ಸಿಬ್ಬಂದಿ ಮಹಾಂತೇಶ ಬಾರ್ಕರ್ ಹಾಗೂ ಅವರ ಜೊತೆಗಿದ್ದ ಹನುಮಂತ ಮಾಕಾಪುರ, ರಾಮಯ್ಯ ಪೂಜಾರಿ, ವಿದ್ಯಾ ನಾಯ್ಕ ಗಾಯಗೊಂಡಿದ್ದರು. ಮಹಿಳಾ ಪೊಲೀಸರ ಬಟ್ಟೆಯನ್ನು ಹರಿದು ದುಷ್ಕರ್ಮಿಗಳು ಪುಂಡಾಟ ಮೆರೆದಿದ್ದರು.
ಅನ್ವರ್ ಭಾಷಾನ ರಕ್ಷಣೆಗಾಗಿ ಪೊಲೀಸರ ಮೇಲೆ ಕೈ ಮಾಡಿದ್ದವರನ್ನು ಅದೇ ದಿನ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ಅನ್ವರ್ ಭಾಷಾ ಮಾತ್ರ ಪತ್ತೆ ಆಗಿರಲಿಲ್ಲ. ಆತನ ಶೋಧ ತೀವೃಗೊಂಡಿದ್ದು ಪಿಎಸ್ಐ ರತ್ನಾ ಕುರಿ ಶನಿವಾರ ಆತನ ಅಡಗುತಾಣವನ್ನು ಪತ್ತೆ ಮಾಡಿದರು. ಆತನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದರು.




