ಜೊಯಿಡಾ: ಹುಬ್ಬಳ್ಳಿಯಿಂದ ಗೋವಾಗೆ ಸಂಚರಿಸುತ್ತಿದ್ದ ಟಾಟಾ ಇಂಟ್ರಾ ವಾಹನಕ್ಕೆ ಗೋವಾದಿಂದ ಬಂದ ಲಾರಿ ಡಿಕ್ಕಿಯಾಗಿದೆ. ಪರಿಣಾಮ ಟಾಟಾ ಇಂಟ್ರಾ ಗೂಡ್ಸ ಚಲಾಯಿಸುತ್ತಿದ್ದ ಮಂಜುನಾಥ ಎಮ್ಮಿ ಸಾವನಪ್ಪಿದ್ದಾರೆ.
ಹುಬ್ಬಳ್ಳಿಯ ಮಂಜುನಾಥ ಎಮ್ಮಿ (31) ಅವರು ಟಾಟಾ ಇಂಟ್ರಾ ಗೂಡ್ಸ ಹೊಂದಿದ್ದರು. ಅದಕ್ಕೆ ಅವರೇ ಚಾಲಕರಾಗಿದ್ದರು. ಜನವರಿ 4ರ ಸಂಜೆ ಅವರು ಹುಬ್ಬಳ್ಳಿಯಿಂದ ಗೋವಾಗೆ ಪ್ಲೆವುಡ್ ತೆಗೆದುಕೊಂಡು ಹೋಗುತ್ತಿದ್ದರು. ಬೆಳಗಾವಿ ಪಣಜಿ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಅವರಿಗೆ ಆನಮೋಡ ಅಬಕಾರಿ ತಪಾಸಣಾ ಕೇಂದ್ರದ ಬಳಿ ಎದುರಿನಿಂದ ಬಂದ ಲಾರಿ ಡಿಕ್ಕಿಯಾಯಿತು.
ಗೋವಾ ಕಡೆಯಿಂದ ಲಾರಿ ಓಡಿಸಿಕೊಂಡು ಬರುತ್ತಿದ್ದ ಗದಗದ ಪ್ರವೀಣ ಪರಡ್ಡಿ ಅವರು ಮಂಜುನಾಥ ಎಮ್ಮಿ ಅವರ ವಾಹನಕ್ಕೆ ತಮ್ಮ ಲಾರಿ ಗುದ್ದಿದರು. ಅಪಘಾತದ ರಭಸಕ್ಕೆ ಮಂಜುನಾಥ ಎಮ್ಮಿ ಅವರ ಕಾಲಿನ ಪಾದ ತುಂಡಾಗಿದ್ದು, ಮುಖಕ್ಕೂ ಭಾರೀ ಪ್ರಮಾಣದಲ್ಲಿ ಪೆಟ್ಟಾಯಿತು. ತಾಸಿನ ಒಳಗೆ ಮಂಜುನಾಥ ಎಮ್ಮಿ ಅವರು ಸಾವನಪ್ಪಿದರು.





