ಸಿವಿಲ್ ಗುತ್ತಿಗೆದಾರ ಅಬ್ದುಲ್ ರಹಮಾನ್ ಸಾಕಿದ್ದ ಕೋಣ ಸಾವನಪ್ಪಿದೆ. ಆಳ್ವೇಸರದ ಉದಯ ಸಿದ್ದಿ ತಮ್ಮ ಬೈಕ್ ಗುದ್ದಿ ಕೋಣದ ಸಾವಿಗೆ ಕಾರಣರಾಗಿದ್ದಾರೆ!
ಯಲ್ಲಾಪುರದ ಮಂಚಿಕೇರಿ ಚರ್ಚ ರಸ್ತೆಯ ಅಬ್ದುಲ್ ರೆಹಮಾನ್ ಕೋಣವನ್ನು ಸಾಕಿದ್ದರು. ಎರಡು ವರ್ಷ ಪ್ರಾಯದ ಕೋಣ ದಷ್ಟಪುಷ್ಟವಾಗಿ ಬೆಳೆದಿತ್ತು. ಜನವರಿ 18ರ ಸಂಜೆ 7 ಗಂಟೆ ಆಸುಪಾಸಿಗೆ ಮಂಚಿಕೇರಿ ಗೌಸ್ ಗದ್ದೆಯ ಬಳಿ ಈ ಕೋಣ ಮೇಯುತ್ತಿತ್ತು.
ಈ ವೇಳೆ ಆಳ್ವೆಸರದ ಉದಯ ಸಿದ್ದಿ ಜೋರಾಗಿ ಬೈಕ್ ಓಡಿಸಿಕೊಂಡು ಬರುತ್ತಿದ್ದರು. ಬೈಕಿನ ಮೇಲಿನ ನಿಯಂತ್ರಣ ತಪ್ಪಿ ಕೋಣಕ್ಕೆ ಗುದ್ದಿದರು. ಗುದ್ದಿದ ರಭಸಕ್ಕೆ ಕೋಣ ಅಲ್ಲಿಯೇ ಕೊನೆ ಉಸಿರೆಳೆಯಿತು.
ಉದಯ ಸಿದ್ದಿ ಸಹ ಬೈಕಿನಿಂದ ಬಿದ್ದು ಗಾಯಗೊಂಡರು. ತಮ್ಮ ಕೋಣ ಸಾವನಪ್ಪಿದ ಕಾರಣ ಉದಯ ಸಿದ್ದಿ ವಿರುದ್ಧ ಅಬ್ದುಲ್ ರಹಮಾನ್ ಪೊಲೀಸ್ ಪ್ರಕರಣ ದಾಖಲಿಸಿದರು.




