ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಅಂಚಿನ ದೋಸೆ ಕ್ಯಾಂಟಿನ್’ಗೆ ಈಚೆಗೆ ಈರುಳ್ಳಿ ಲಾರಿ ನುಗ್ಗಿ ಗ್ಯಾಸ್ ಸಿಲೆಂಡರ್ ಸೋರಿಕೆ ನಡೆದರೂ ಸರ್ಕಾರ ರಸ್ತೆ ಅಂಚಿನ ಪ್ರದೇಶ ಅತಿಕ್ರಮಿಸಿ ವ್ಯಾಪಾರ ನಡೆಸುವುದನ್ನು ನಿಯಂತ್ರಿಸಿಲ್ಲ. ಪಾದಚಾರಿ ಮಾರ್ಗ ಅತಿಕ್ರಮಣ ಸೇರಿ ಪದೇ ಪದೇ ನಿಯಮ ಉಲ್ಲಂಘಿಸುವವರಿ0ದ ಕಾಸು ಪಡೆಯುವ ಯಲ್ಲಾಪುರ ಪಟ್ಟಣ ಪಂಚಾಯತ ಅಡ್ಡದಾರಿಯ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿದೆ.
ಯಲ್ಲಾಪುರ ಪಟ್ಟಣ ವ್ಯಾಪ್ತಿಯಲ್ಲಿ ಅನೇಕ ಕಡೆ ಪಾದಚಾರಿ ಮಾರ್ಗ ಅತಿಕ್ರಮಣವಾಗಿದೆ. ಹೂ-ಹಣ್ಣು ವ್ಯಾಪಾರಸ್ಥರು, ಮೀನು ಮಾರಾಟ ಮಹಿಳೆಯರು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿ ರಸ್ತೆ ಅಂಚಿನ ಪ್ರದೇಶದಲ್ಲಿ ಕೂರುತ್ತಿದ್ದಾರೆ. ಮೀನು ಮಾರಾಟಕ್ಕಾಗಿ ಪ್ರತ್ಯೇಕ ಮಾರುಕಟ್ಟೆ ಇದ್ದರೂ ಮೀನು ಮಾರುವ ಮಹಿಳೆಯರಿಗೆ ಅಲ್ಲಿ ಅವಕಾಶವಿಲ್ಲ. ಕಳೆದ ಒಂದುವರೆ ವರ್ಷದಿಂದ ಮೀನು ಮಾರುಕಟ್ಟೆಯ ಟೆಂಡರ್ ಕರೆಯದಿದ್ದರೂ ಮಾರುಕಟ್ಟೆ ಮಾತ್ರ ಎಂದಿನoತೆ ನಡೆಯುತ್ತಿದೆ. ಇಲ್ಲಿನ ಮಾರಾಟಗಾರರು ನೀಡುವ ಬಾಡಿಗೆ ಹಣದ ಬಗ್ಗೆಯೂ ಯಾರಿಗೂ ಗೊತ್ತಿಲ್ಲ!
ಪುಕ್ಕಟೆ ಮೀನಿಗೆ ಮಾರಿ ಹೋದವರಾರು?
ರಸ್ತೆ ಬದಿ ಮೀನು ಹಾಗೂ ಮಾಂಸ ಮಾರಾಟ ನಡೆಯುತ್ತಿರುವುದರಿಂದ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಿದೆ. ಮೀನು ತ್ಯಾಜ್ಯದ ನೀರು ಕುಡಿಯುವ ನೀರಿನ ಜೊತೆ ಮಿಶ್ರಣವಾಗುತ್ತಿದೆ. ನೋಟಿಸ್ ನೀಡುವಿಕೆ, ಒಕ್ಕಲೆಬ್ಬಿಸುವಿಕೆಯ ನಾಟಕ ನಡೆದಿದ್ದರೂ ಅದು ದಾಖಲೆಗಳಿಗೆ ಮಾತ್ರ ಸೀಮಿತವಾಗಿದೆ. `ಕಂಡ ಕಂಡಲ್ಲಿ ಮೀನು ಮಾರಾಟಕ್ಕೆ ಅವಕಾಶ ಕೊಡಬಾರದು’ ಎಂದು ಜನ ಪ್ರತಿಭಟಿಸಿದರೂ ಇದರಿಂದ ಯಾವ ಪ್ರಯೋಜನವೂ ಆಗುತ್ತಿಲ್ಲ. ಪಟ್ಟಣ ಪಂಚಾಯತದ ಅಧಿಕಾರಿ-ಸಿಬ್ಬಂದಿ ಇಲ್ಲಿನ ಮೀನು ಮಾರಾಟಗಾರರಿಂದಲೇ ನಿತ್ಯ (ಸೋಮವಾರಹೊರತುಪಡಿಸಿ) ಪುಕ್ಕಟ್ಟೆ ಮೀನು ಪಡೆಯುತ್ತಿರುವ ಆರೋಪಗಳಿವೆ!
`ಮೀನು ಮಾರುಕಟ್ಟೆ ಟೆಂಡರ್ ಕರೆಯದೇ ಬಾಡಿಗೆ ವಸೂಲಿ ಮಾಡುತ್ತಿರುವ ಬಗ್ಗೆ ಪ ಪಂ ಅಧಿಕಾರಿ ಹಾಗೂ ಅಧ್ಯಕ್ಷರ ಗಮನಕ್ಕೆ ತಂದರೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ದೂರಿದ್ದಾರೆ. `ಸರ್ಕಾರಿ ಅನುದಾನದ ಅಡಿ ಮೀನು ಮಾರುಕಟ್ಟೆ ನಿರ್ಮಿಸಲಾಗಿದ್ದು, ಅಲ್ಲಿ ಮೊದಲಿನಿಂದ ಮೀನು ಮಾರಾಟ ನಡೆಯುತ್ತಿದೆ. ಆದರೆ, ಅದರ ಬಾಡಿಗೆ ಹಣ ಮಾತ್ರ ಅನ್ಯರ ಪಾಲಾಗುತ್ತಿದೆ’ ಎಂದವರು ವಿವರಿಸಿದ್ದಾರೆ.

ಮೂರು ದಿನದಲ್ಲಿ ಉತ್ತರಿಸಿ!
`ಪಟ್ಟಣದಲ್ಲಿ ಸುವ್ಯವಸ್ಥಿತವಾದ ತರಕಾರಿ ಮಾರುಕಟ್ಟೆಯಿದೆ. ಆದರೆ, ತರಕಾರಿ ಮಾರುಕಟ್ಟೆ ಹೊರತುಪಡಿಸಿ ರಸ್ತೆ ಬದಿ ವ್ಯಾಪಾರ ಮಾಡುವವರ ಸಂಖ್ಯೆ ಹೆಚ್ಚಿದೆ. ಇದರಿಂದ ಶಾಲಾ ಮಕ್ಕಳು-ಪಾದಚಾರಿಗಳಿಗೆ ನಿತ್ಯ ಸಮಸ್ಯೆಯಾಗುತ್ತಿದೆ. ಈ ಬಗ್ಗೆಯೂ ಆಡಳಿತ ಮೌನವಾಗಿದೆ’ ಎಂದು ಸೋಮೇಶ್ವರ ನಾಯ್ಕ ಗಮನಸೆಳೆದಿದ್ದಾರೆ. ಇನ್ನೂ ಮೂರು ದಿನದಲ್ಲಿ ಅನಧಿಕೃತ ಮಾರುಕಟ್ಟೆಯನ್ನು ಖುಲ್ಲಾಪಡಿಸಿ ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸದೇ ಇದ್ದರೆ ಪಟ್ಟಣ ಪಂಚಾಯತ ಕಚೇರಿ ಎದುರು ಮೀನು ಮಾರಾಟ ನಡೆಸಿ ಪ್ರತಿಭಟಿಸುವುದಾಗಿ ಸೋಮೇಶ್ವರ ನಾಯ್ಕ ಎಚ್ಚರಿಸಿದ್ದಾರೆ.






