ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಅಡಿಗಲ್ಲು ಹಾಕಿದ್ದ ಹುಬ್ಬಳ್ಳಿ – ಅಂಕೋಲಾ ರೈಲ್ವೇ ಯೋಜನೆ ವಾಜಪೇಯಿ ಅವರ ಜನ್ಮ ಶತಮಾನೋತ್ಸವ ವರ್ಷ ಸಮೀಪಿಸಿದರೂ ಪೂರ್ಣಗೊಂಡಿಲ್ಲ!
1999ರಲ್ಲಿ ಪ್ರಧಾನಮಂತ್ರಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಹುಬ್ಬಳ್ಳಿ-ಅಂಕೋಲಾ ಯೋಜನೆಗೆ ಅಡಿಗಲ್ಲು ಹಾಕಿದ್ದರು. ಅದಾದ ನಂತರ ಕಲಘಟಗಿಯವರೆಗೂ ರೈಲ್ವೆ ಮಾರ್ಗದ ಕಾಮಗಾರಿ ನಡೆದಿತ್ತು. 35ಕಿಮೀ ಉದ್ದದ ರೈಲ್ವೆ ಹಳಿ ಅಳವಡಿಕೆಯಾದ ನಂತರ ಕೆಲವರು ಯೋಜನೆಯನ್ನು ವಿರೋಧಿಸಿ ಹೋರಾಟ ನಡೆಸಿದ್ದು, ಅದರ ಪರಿಣಾಮ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ನೆನೆಗುದಿಗೆ ಬಿದ್ದಿತು.
ಕಳೆದ 25 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರೈಲು ಮಾರ್ಗಕ್ಕೆ ಪದೇ ಪದೇ ಅಡ್ಡಗಾಲು ಹಾಕುತ್ತಿರುವ ಡೋಂಗಿ ಪರಿಸರವಾದಿಗಳ ವಿರುದ್ಧ ಸಮಾನ ಮನಸ್ಕರು ಕಿಡಿಕಾರಿದ್ದಾರೆ. `ಈ ರೈಲ್ವೇ ಯೋಜನೆ ಅನುಷ್ಠಾನವಾಗಬೇಕು’ ಎಂದು ಅನೇಕರು ಹೋರಾಡುತ್ತಿದ್ದಾರೆ. `ರೈಲ್ವೇ ಯೋಜನೆ ಬೇಡ’ ಎಂದು ಇನ್ನೂ ಅನೇಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಯೋಜನೆ ಅನುಷ್ಠಾನಕ್ಕಾಗಿ ಈಗಾಲೇ ನೂರಾರು ಕೋಟಿ ಸರ್ಕಾರದ ಹಣ ವೆಚ್ಚವಾಗಿದೆ. ಅದಾಗಿಯೂ ಯೋಜನಾ ವೆಚ್ಚ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಆದರೆ, ಕೆಲಸ ಮಾತ್ರ ಕಿಂಚಿತ್ತು ಮುಂದೆ ಸಾಗುತ್ತಿಲ್ಲ.
`ಅಟಲ್ ಬಿಹಾರಿ ವಾಜಪೇಯಿ ಅವರು ಕಂಡ ಕನಸು ನನಸಾಗಬೇಕು’ ಎಂದು ಯಲ್ಲಾಪುರದ ನಾಗರಿಕ ವೇದಿಕೆ ಅಡಿ ಸಮಾನ ಮನಸ್ಕರು ಒತ್ತಾಯಿಸಿದ್ದಾರೆ. ಈ ಕುರಿತು ರೈಲ್ವೇ ರಾಜ್ಯ ಖಾತೆ ಸಚಿವರಿಗೂ ಅವರೆಲ್ಲರೂ ಪತ್ರ ಬರೆದಿದ್ದಾರೆ. `ಬೇರೆ ಬೇರೆ ಯೋಜನೆಗಳಿಗೆ ಅಡ್ಡವಾಗದ ಪರಿಸರ ಈ ಯೋಜನೆಗೆ ಮಾತ್ರ ತೊಂದರೆ ಮಾಡುವುದರ ಹಿಂದೆ ದುಷ್ಠಶಕ್ತಿಗಳ ಕೈವಾಡವಿದೆ’ ಎಂದವರು ದೂರಿದ್ದಾರೆ.
ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಅವರು ಬರೆದ ಪತ್ರಕ್ಕೆ ಪ್ರಮುಖರಾದ ಬೀರಣ್ಣ ನಾಯಕ ಮೊಗಟಾ, ತುಳಸಿ ಪಾಲೇಕರ, ಡಿಜಿ ಹೆಗಡೆ, ಶ್ರೀರಂಗ ಕಟ್ಟಿ, ವೇಣುಗೋಪಾಲ ಮದ್ಗುಣಿ, ಭವ್ಯ ಶೆಟ್ಟಿ, ಕೆ ವಿ ದೇವನಳ್ಳಿ ಸಹಿ ಮಾಡಿದ್ದಾರೆ. ಸುರೇಶ ಬೋರಕರ್, ಬೆಬಿ ಅಮೀನಾ, ಜಗನ್ನಾಥ ರೇವಣಕರ್, ಅಬ್ದುಲ್ ಖಾದರ ಶೇಖ್, ಜಸಂತೋ ಫರ್ನಾಂಡಿಸ್, ಮಾಧವ ನಾಯಕ, ಲಕ್ಷಿ ನಾರಾಯಣ ತೊಟ್ಮನೆ ಸಹ ಸಮ್ಮತಿ ಸೂಚಿಸಿದ್ದಾರೆ. ಈ ಪತ್ರವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಹ್ಲಾದ ಜೋಶಿ, ಸಚಿವ ಮಂಕಾಳು ವೈದ್ಯ, ಶಾಸಕ ಶಿವರಾಮ ಹೆಬ್ಬಾರ್, ಶಾಂತರಾಮ ಸಿದ್ದಿ, ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದ ಜೊತೆ ರೈಲ್ವೇ ಸಲಹಾ ಮಂಡಳಿಯ ಅಧ್ಯಕ್ಷ ಜಾರ್ಜ ಫರ್ನಾಂಡಿಸ್ ಅವರಿಗೂ ಕಳುಹಿಸಿದ್ದಾರೆ.






