30 ವರ್ಷದ ಹಿಂದಿನ ದಾಖಲೆಗಳ ಪ್ರಕಾರ ಅಲ್ಲಿ ಸಾರ್ವಜನಿಕ ಓಡಾಟಕ್ಕೆ ರಸ್ತೆ ಇತ್ತು. ಆದರೆ, ಆ ರಸ್ತೆ ಇದೀಗ ಕಾಣುತ್ತಿಲ್ಲ. ಹೀಗಾಗಿ ನಿವೃತ್ತ ಉಪತಹಶೀಲ್ದಾರ್ ಚಂದ್ರಶೇಖರ ನಾಯ್ಕ ಅವರಿಗೆ ಮನೆಗೆ ತೆರಳಲು ದಾರಿಯಿಲ್ಲ!
ಕುಮಟಾ ತಾಲೂಕಿನ ಇಂಡಸ್ಟಿಯಲ್ ಏರಿಯಾದ ದುರ್ಗಾ ಕಾಲೋನಿಯಲ್ಲಿ ಈ ಹಿಂದೆ ಅಕ್ರಮ ಚೀರೆಕಲ್ಲು ಗಣಿಗಾರಿಕೆ ನಡೆಯುತ್ತಿತ್ತು. ಅಕ್ರಮ ನಡೆಸುವವರು ತಮ್ಮ ಅನುಕೂಲಕ್ಕಾಗಿ ದಬ್ಬಾಳಿಕೆಯಿಂದ ಆ ರಸ್ತೆಯನ್ನು ಬಂದ್ ಮಾಡಿದ್ದರು. ಇದೀಗ ಚೀರೆಕಲ್ಲು ಗಣಿಗಾರಿಕೆ ಸ್ಥಗಿತವಾಗಿದ್ದರೂ ಆ ರಸ್ತೆ ಮಾತ್ರ ಸಿಗುತ್ತಿಲ್ಲ. ಚಂದ್ರಶೇಖರ್ ನಾಯ್ಕ ಅವರಿಗೆ ಈ ಭಾಗದಲ್ಲಿ ಪಿತ್ರಾರ್ಜಿತವಾಗಿ ಬಂದ ಭೂಮಿಯಿದೆ. ನಿವೃತ್ತಿ ನಂತರ ಅವರು ತಮ್ಮ ಕ್ಷೇತ್ರದಲ್ಲಿ ವಾಸಿಸಲು ಉದ್ದೇಶಿಸಿದಾಗ ಅವರಿಗೆ ಮೊದಲು ರಸ್ತೆ ಸಮಸ್ಯೆ ದೊಡ್ಡದಾಯಿತು. ದಾಖಲೆ ಪ್ರಕಾರ 16 ಪೂಟ್ ಅಗಲದ ರಸ್ತೆ ಎಂದು ನಮೂದಾಗಿದ್ದರೂ ಸ್ಥಳದಲ್ಲಿ ಕಾಲು ದಾರಿ ಸಹ ಸರಿಯಾಗಿ ಕಾಣುತ್ತಿಲ್ಲ. ಗಣಿಗಾರಿಕೆ ಸ್ಥಗಿತವಾದ ನಂತರ ಅಕ್ಕ-ಪಕ್ಕದ ನಿವಾಸಿಗಳು ರಸ್ತೆಯನ್ನು ಸೇರಿಸಿ ಬೇಲಿ ನಿರ್ಮಿಸಿಕೊಂಡಿದ್ದರಿoದ ಚಂದ್ರಶೇಖರ ನಾಯ್ಕ ಅವರು ಕಂಗಾಲಾದರು.
ಚoದ್ರಶೇಖರ ನಾಯ್ಕ ಅವರು 2008ರಿಂದಲೂ ರಸ್ತೆಗಾಗಿ ಹೋರಾಡುತ್ತಿದ್ದಾರೆ. ಅರಣ್ಯ ಪ್ರದೇಶದಲ್ಲಿರುವ ರಸ್ತೆ ಅತಿಕ್ರಮಣವಾಗಿರುವ ಬಗ್ಗೆಯೂ ಅವರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರ ಅರ್ಜಿಗೆ ಈವರೆಗೂ ಯಾವುದೇ ಕ್ರಮವಾಗಿಲ್ಲ. ಕೊನೆಗೆ ನ್ಯಾಯಕ್ಕಾಗಿ ಅವರು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಅವರ ಬಳಿ ಬಂದಿದ್ದು, ಅವರು ಸಹ ಇದೀಗ ಈ ಪ್ರಕರಣಕ್ಕಾಗಿ ಹೋರಾಟದ ಹಾದಿ ಹಿಡಿದಿದ್ದಾರೆ. `1980ರ ದಾಖಲೆ ಪ್ರಕಾರ ಇದ್ದ ದಾರಿಯನ್ನು ಕಾಣಿಸಿಕೊಡಿ’ ಎಂದವರು ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಾರೆ. ರಸ್ತೆ ಹುಡುಕಿಕೊಡದೇ ಇದ್ದರೆ ಅರಣ್ಯ ಸಚಿವರಿಗೆ ಪತ್ರ ಬರೆಯುವುದಾಗಿ ಅವರು ಎಚ್ಚರಿಸಿದ್ದಾರೆ. ಜೊತೆಗೆ ಸುಪ್ರೀಂ ಕೋರ್ಟ ಆದೇಶ ಉಲ್ಲಂಘನೆಯಾಗಿರುವುದನ್ನು ಸಹ ಅವರು ವಿವರಿಸಿದ್ದಾರೆ. ನಿವೃತ್ತ ಉಪತಹಶೀಲ್ದಾರ್ ಚಂದ್ರಶೇಖರ ನಾಯ್ಕ ಅವರಿಗೆ ಆದ ಅನ್ಯಾಯದ ವಿರುದ್ಧದ ಹೋರಾಟಕ್ಕೆ ಆ ಭಾಗದ ಶ್ರೀಪಾದ ಭಟ್ಟ, ವೀಣಾ ಭಟ್ಟ ಹಾಗೂ ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ಬೆಂಬಲ ನೀಡಿದ್ದಾರೆ.





