ನರ್ಸ ಕಾವ್ಯಾ ಅಂಬಿಗ ಹಾಗೂ ಅವರ ತಾಯಿ ಶಶಿಕಲಾ ಅಂಬಿಗ ಅವರನ್ನು ಮನೆಯಲ್ಲಿ ಕೂಡಿ ಹಾಕಿದ ದುಷ್ಕರ್ಮಿಗಳು ಕಾವ್ಯ ಅವರ ಅಣ್ಣ ಮಣಿಕಂಠ ಅಂಬಿಗ ಅವರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಇದರಿಂದ ಬೆದರಿದ ಕಾವ್ಯ ಅಂಬಿಗ ಅವರು ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ.
ಕುಮಟಾದ ಧಾರೇಶ್ವರದಲ್ಲಿ ಕಾವ್ಯ ಅಂಬಿಗ ಅವರು ತಮ್ಮ ಕುಟುಂಬದವರ ಜೊತೆ ವಾಸವಾಗಿದ್ದಾರೆ. ನರ್ಸ ಆಗಿ ಸೇವೆಯಲ್ಲಿರುವ ಅವರ ಮನೆಯಲ್ಲಿ ತಂದೆ ಮಂಜುನಾಥ ಅಂಬಿಗ, ತಾಯಿ ಶಶಿಕಲಾ ಅಂಬಿಗ ಹಾಗೂ ಅಣ್ಣ ಮಣಿಕಂಠ ಅಂಬಿಗ ಜೊತೆಗಿರುತ್ತಾರೆ. ಹೀಗಿರುವಾಗ ಮಣಿಕಂಠ ಅಂಬಿಗ ಅವರು ಫೆ 3ರ ರಾತ್ರಿ ತಮ್ಮ ಸ್ನೇಹಿತ ಕುಮಾರ ಅಂಬಿಗ ಜೊತೆ ಮನೆ ಮುಂದೆ ಮಾತನಾಡುತ್ತಿದ್ದರು. ಆಗ ಅಲ್ಲಿಗೆ ಬಂದ ಅದೇ ಊರಿನ ನಿಶಾಂತ ಅಂಬಿಗ ಹಾಗೂ ರಾಜು ಅಂಬಿಗ ಎಂಬಾತರು ಮಣಿಕಂಠ ಅಂಬಿಗ ಅವರ ಕೆನ್ನೆಗೆ ಬಾರಿಸಿದರು. ಕೆಟ್ಟ ಶಬ್ದಗಳಿಂದ ನಿಂದಿಸಿದರು.
ಇದನ್ನು ನೋಡಿದ ಕಾವ್ಯ ಅಂಬಿಗ ಹಾಗೂ ಶಶಿಕಲಾ ಅಂಬಿಗ ಅವರು ಹೊಡೆದಾಟ ತಪ್ಪಿಸಲು ಬಂದರು. ಆಗ, ಮಹಿಳೆಯರಿಬ್ಬರ ಮೈ ಮುಟ್ಟಿದ ದುಷ್ಕರ್ಮಿಗಳು ಮಾನ ಕಳೆಯುವ ಪ್ರಯತ್ನ ನಡೆಸಿದರು. ಜೊತೆಗೆ ಆ ಇಬ್ಬರನ್ನು ಮನೆಯೊಳಗೆ ಕೂಡಿ ಹಾಕಿ, ಮನೆ ಮೇಲೆ ಕಲ್ಲು ಎಸೆದರು. ನಂತರ ಮಣಿಕಂಠ ಅಂಬಿಗ ಅವರ ತಲೆಯನ್ನು ಕಲ್ಲಿನಿಂದ ಜಜ್ಜಿ ಗಾಯಪಡಿಸಿದರು.
ದುಷ್ಕರ್ಮಿಗಳು ಕಲ್ಲು ತೂರಿದ ಕಾರಣ ಮನೆಯ ಹಂಚುಗಳು ಒಡೆದವು. ಈ ವೇಳೆ `ಮನೆಯಿಂದ ಹೊರ ಬಂದರೆ ಸಾಯಿಸುವೆ’ ಎಂದು ಬೆದರಿಸಿದರು. ಅವರು ಹೋದ ನಂತರ ಕುಟುಂಬದವರು ಗಾಯಾಳುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಇದಾದ ಮೇಲೆ ರಕ್ಷಣೆ ಕೋರಿ ಪೊಲೀಸರ ಮೊರೆ ಹೋದರು. ಕಾವ್ಯ ಅಂಬಿಗ ಅವರು ನೀಡಿದ ದೂರಿನ ಅನ್ವಯ ಪೊಲೀಸರು ನಿಶಾಂತ ಅಂಬಿಗ ಹಾಗೂ ರಾಜು ಅಂಬಿಗ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.




