`ರಾತ್ರಿ 11 ಗಂಟೆ ವೇಳೆಗೂ ಮಹಿಳೆಯರನ್ನು ಮಾತನಾಡಿಸುವುದಕ್ಕಾಗಿ ಮೈಕ್ರೋ ಫೈನಾನ್ಸ ಸಿಬ್ಬಂದಿ ಮನೆಗೆ ನುಗ್ಗುತ್ತಾರೆ. ಸ್ವಲ್ಪ ಸಮಯಕೊಡಿ ಎಂದು ಬೇಡಿಕೊಂಡರೂ ಬಿಡುವುದಿಲ್ಲ’ ಎಂದು ಸಾಲಗಾರ ಮಹಿಳೆಯರು ತಹಶೀಲ್ದಾರ್ ಯಲ್ಲಪ್ಪ ಗೊನೆಣ್ಣವರ್ ಅವರ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಗುರುವಾರ ಸಂಜೆ ಯಲ್ಲಾಪುರ ತಹಶೀಲ್ದಾರ್ ಕಚೇರಿಯಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಸಂತ್ರಸ್ತರು ತಮ್ಮ ಸಮಸ್ಯೆ ಹೇಳಿಕೊಂಡರು. `ಸಾಲ ನೀಡುವಾಗ ನಯವಾಗಿ ಮಾತನಾಡುವ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಸಾಲ ಮರುಪಾವತಿಗೆ ಒತ್ತಾಯಿಸಿ ಸತಾಯಿಸುತ್ತಾರೆ’ ಎಂದು ದೂರಿದರು. `ಸೂಕ್ತ ಕೆಲಸ ಇಲ್ಲದ ಕಾರಣ ಸಾಲ ಪಾವತಿಗೆ ಸಮಸ್ಯೆ ಆಗುತ್ತಿದೆ’ ಎಂದು ಸಮಸ್ಯೆ ಬಿಚ್ಚಿಟ್ಟರು.
ಸಮಸ್ಯೆ ಆಲಿಸಿದ ತಹಶೀಲ್ದಾರ್ ಯಲ್ಲಪ್ಪ ಗೊನೆಣ್ಣವರ್ ಕಂಪನಿ ಸಿಬ್ಬಂದಿಗೆ ಸೂಕ್ತ ಎಚ್ಚರಿಕೆ ನೀಡಿದರು. `ಸಾಲ ಕೊಡುವಾಗ ಹಾಗೂ ವಸೂಲಿ ಮಾಡುವಾಗ ಆರ್ಬಿಐ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಅವರು ಸೂಚಿಸಿದರು. `ಸಾಲ ವಸೂಲಾತಿಗಾಗಿ ಹೋದವರು ಸಾಲಗಾರರ ಜೊತೆ ಸೌಜನ್ಯದಿಂದ ವರ್ತಿಸಬೇಕು. ಅವರನ್ನು ನಿಂದಿಸುವುದು, ರಾತ್ರಿ ವೇಳೆ ಮನೆಗೆ ಹೋಗುವುದು ಮಾಡಿದರೆ ಕಾನೂನು ಕ್ರಮ ಅನಿವಾರ್ಯ’ ಎಂದು ಎಚ್ಚರಿಸಿದರು.
`ಫೈನಾನ್ಸ್ ಕಂಪನಿಯವರು ಸಿಬ್ಬಂದಿ ನೇಮಕಾತಿಗೆ ಪೊಲೀಸ್ ವೆರಿಪಿಕೇಶನ್ ಮಾಡಿಸಿಕೊಳ್ಳುವುದು ಕಡ್ಡಾಯ. ಕ್ರಿಮಿನಲ್ ಹಿನ್ನಲೆ ಇದ್ದವರ ಬಗ್ಗೆ ನಿಗಾಹೊಂದಿರಬೇಕು’ ಎಂದು ಹೇಳಿದರು. `ವಾಹನಗಳನ್ನು ವಶಕ್ಕೆ ಪಡೆಯುವಾಗ ಪೊಲೀಸರಿಗೆ ಮಾಹಿತಿ ನೀಡುವುದು ಕಡ್ಡಾಯ. ಸಂಜೆ 5 ಗಂಟೆ ನಂತರ ಸಾಲ ವಸೂಲಾತಿ ಮಾಡಬಾರದು. ಸಾಲಗಾರರ ಹೆಸರನ್ನು ಘೋಷಿಸಿ ಅವಮಾನ ಮಾಡುವುದು ಸರಿಯಲ್ಲ’ ಎಂದು ವಿವರಿಸಿದರು.
ಪಿಐ ಯಲ್ಲಾಲಿಂಗ ಕುನ್ನೂರು ಮಾತನಾಡಿ, `ಕಾನೂನು ಪ್ರಕಾರ ಹೋದರೂ ಫೈನಾನ್ಸ್ ಕಂಪನಿಗಳ ಹಣ ಸಿಗುತ್ತದೆ. ಹೀಗಾಗಿ ಕಾನೂನು ಪ್ರಕಾರವೇ ವರ್ತಿಸಬೇಕು’ ಎಂದು ಸೂಚಿಸಿದರು. `ಬೇಕಾಬಿಟ್ಟಿ ಬಡ್ಡಿದರ ವಿಧಿಸುವಂತಿಲ್ಲ’ ಎಂದು ಎಚ್ಚರಿಸಿದರು.




