ಶಿರಸಿಯ ತೋಟಗಾರಿಕಾ ಇಲಾಖೆ ಆವರಣದಲ್ಲಿ ಕೃಷಿ ಇಲಾಖೆ ಸಹಯೋಗದಲ್ಲಿ ಫಲ-ಪುಷ್ಪ ಪ್ರದರ್ಶನ ನಡೆಸಲು ನಿರ್ಧರಿಸಲಾಗಿದೆ. ಈ ವೇಳೆ ಸಾವಯವ ಸಿರಿಧಾನ್ಯ ಮೇಳ ಸಹ ನಡೆಯಲಿದೆ.
ಮಾರ್ಚ 1ರಿಂದ 3ರವರೆಗೆ ಈ ಮೇಳ ಆಯೋಜಿಸಿರುವುದಾಗಿ ತೋಟಗಾರಿಕೆ ಉಪ ನಿರ್ದೇಶಕ ಬಿ ಪಿ ಸತೀಶ ಮಾಹಿತಿ ನೀಡಿದ್ದಾರೆ. ಜಿಲ್ಲಾ ಮಟ್ಟದ ಪ್ರದರ್ಶನ ಮೇಳ ಇದಾಗಲಿದ್ದು, ಬಗೆ ಬಗೆಯ ಫಲ-ಪುಷ್ಪಗಳು ಬರಲಿರುವ ನಿರೀಕ್ಷೆಯಿದೆ.
`ತೋಟಗಾರಿಕೆಗೆ ಪ್ರಾಧಾನ್ಯತೆ ಹೊಂದಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ತೋಟಗಾರಿಕೆ ಮಹತ್ವದ ಬಗ್ಗೆ ರೈತ ಸಮುದಾಯಕ್ಕೆ ಹಾಗೂ ಜನ ಸಾಮಾನ್ಯರಿಗೆ ಅರಿವು ಮೂಡಿಸುವದಕ್ಕಾಗಿ ಈ ಮೇಳ ಆಯೋಜಿಸಲಾಗಿದೆ. ತೋಟಗಾರಿಕೆಯಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಿ ಪ್ರೋತ್ಸಾಹಿಸುವುದು ತೋಟಗಾರಿಕಾ ಇಲಾಖೆಯ ಉದ್ದೇಶ’ ಎಂದು ಬಿ ಪಿ ಸತೀಶ ಹೇಳಿದ್ದಾರೆ.
ಇನ್ನೂ `ಸಿರಿಧಾನ್ಯಗಳ ಮಹತ್ವದ ಬಗ್ಗೆ ಅರಿವು ಮೂಡಿಸುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಮೂರು ದಿನಗಳ ಕಾಲ ಶಿರಸಿಯ ತೋಟಗಾರಿಕಾ ಕೃಷಿ ಇಲಾಖೆಯ ಉಪನಿರ್ದೇಶಕರ ಕಛೇರಿಯ ಆವರಣದಲ್ಲಿ ಜಿಲ್ಲಾ ಮಟ್ಟದ ಸಾವಯವ ಸಿರಿಧಾನ್ಯ ಮೇಳವನ್ನು ಏರ್ಪಡಿಸಲಾಗಿದೆ’ ಎಂದವರು ಮಾಹಿತಿ ನೀಡಿದ್ದಾರೆ.
ತೋಟಗಾರಿಕಾ ಇಲಾಖೆ ಅಧಿಕಾರಿಗಳಾದ ಸತೀಶ ಹೆಗಡೆ, ಮಧುಕರ ನಾಯ್ಕ ಈ ವೇಳೆ ಇದ್ದರು.





