ಕಾರವಾರದ ಸದಾಶಿವಗಡದಲ್ಲಿ ಹೊಸ ಮನೆ ನಿರ್ಮಿಸಿಕೊಂಡಿದ್ದ ನಿವೃತ್ತ ಪೊಲೀಸ್ ಅಧಿಕಾರಿ ರಮೇಶ ರಾಣೆ, ಅದೇ ಮನೆ ಮಹಡಿಯಿಂದ ಬಿದ್ದು ಸಾವನಪ್ಪಿದ್ದಾರೆ.
ರಮೇಶ ರಾಣೆ ಅವರು ಮಹಾರಾಷ್ಟದಲ್ಲಿ ಪೊಲೀಸ್ ಉಪನಿರೀಕ್ಷಕರಾಗಿದ್ದರು. ಎರಡು ವರ್ಷದ ಹಿಂದೆ ಅವರು ನಿವೃತ್ತರಾಗಿದ್ದರು. ನಿವೃತ್ತಿ ನಂತರ ಊರಾದ ಸದಾಶಿವಗಡದ ಮಾನೆವಾಡಕ್ಕೆ ಮರಳಿದ ಅವರು ಅಲ್ಲಿ ಹೊಸದಾಗಿ ಮನೆ ನಿರ್ಮಿಸಿದ್ದರು.
ಮನೆ ಗೃಹಪ್ರವೇಶ ಮುಗಿಸಿದ ಅವರು ಮಾರ್ಚ 13ರಂದು ಮನೆಗೆ ಕಟ್ಟಿದ ಮಾವಿನ ತೋರಣ ತೆಗೆಯುತ್ತಿದ್ದರು. ಮಹಡಿ ಮೇಲಿಂದ ಆಯತಪ್ಪಿ ನೆಲಕ್ಕೆ ಬಿದ್ದ ಅವರು ಪೆಟ್ಟು ಮಾಡಿಕೊಂಡರು. ತಲೆ ಹಾಗೂ ಎದೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿತ್ತು.
ಕೂಡಲೇ ಅವರನ್ನು ಕಾರವಾರದ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಪ್ರಥಮ ಚಿಕಿತ್ಸೆ ನಂತರ ಗೋವಾದ ಬಾಂಬೋಲಿ ಆಸ್ಪತ್ರೆಗೆ ರವಾನಿಸಲಾಯಿತು. ಐದು ದಿನಗಳ ಕಾಲ ಅಲ್ಲಿ ನರಳಾಡಿದ ಅವರು ಮಂಗಳವಾರ ಕೊನೆ ಉಸಿರೆಳೆದರು. ಸದಾಶಿವಗಡ ದೇವಾವಾಡದಲ್ಲಿರುವ ರಮೇಶ ರಾಣೆ ಅವರ ಭಾವ ಪ್ರದೀಪ ಕದಂ ಈ ಬಗ್ಗೆ ಚಿತ್ತಾಕುಲ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.






