ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಡಲತೀರ, ರಾಷ್ಟ್ರೀಯ ಹೆದ್ದಾರಿ ಸೇರಿ ಸಾರ್ವಜನಿಕ ಪ್ರದೇಶದಲ್ಲಿ ಮೋಜು-ಮಸ್ತಿಯಲ್ಲಿ ತೊಡಗಿದವರಿಗೆ ಜಿಲ್ಲಾಡಳಿತ ಚಾಟಿ ಬೀಸಿದೆ. ಫ್ಲೈ ಓವರ್ ಅಡಿಭಾಗ, ಸಮುದ್ರ ತೀರ ಹಾಗೂ ರಸ್ತೆ ಅಂಚಿನಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದೆ.
ಪ್ರವಾಸಿಗರು ಮುಜುಗರ ಅನುಭವಿಸುವ ಸನ್ನಿವೇಷ ಸೃಷ್ಠಿಸುವವರಿಗೆ ಕಡಿವಾಣ ಹಾಕುವುದಕ್ಕಾಗಿ ಉತ್ತರ ಕನ್ನಡ ಜಿಲ್ಲಾಡಳಿತ ಸಮಿತಿಯೊಂದನ್ನು ರಚಿಸಿದೆ. ವಿವಿಧ ಪ್ರದೇಶಗಳಿಗೆ ಗಸ್ತು ತಿರುಗುವುದು ಈ ಸಮಿತಿಯ ಮುಖ್ಯ ಜವಾಬ್ದಾರಿ. ಕಂದಾಯ, ಪೊಲೀಸ್ ಹಾಗೂ ನಗರಸಭೆ ಅಧಿಕಾರಿ-ಸಿಬ್ಬಂದಿಯನ್ನು ಒಳಗೊಂಡ ಸಮಿತಿ ಅನುಚಿತವಾಗಿ ವರ್ತಿಸುವವರಿಗೆ ದಂಡ ವಿಧಿಸುವ ಅಧಿಕಾರವನ್ನು ಹೊಂದಿದೆ.
ಕಾರವಾರದ ರಾಷ್ಟ್ರೀಯ ಹೆದ್ದಾರಿ ಫ್ಲೈ ಓವರ್ ಕೆಳಗೆ ಕೆಲವರು ಕಾರಿನಲ್ಲಿ ಕೂತು ಮದ್ಯ ವ್ಯಸನ ನಡೆಸುವ ಬಗ್ಗೆ ಜಿಲ್ಲಾಡಳಿತಕ್ಕೆ ಸಾಕಷ್ಟು ದೂರು ಸಲ್ಲಿಕೆಯಾಗಿದ್ದವು. ವಿಶೇಷವಾಗಿ ಸಂಜೆ ಸಮಯದಲ್ಲಿ ಅನೇಕರು ಕಡಲತೀರಗಳಲ್ಲಿಯೂ ಮಾದಕ ವ್ಯಸನದಲ್ಲಿರುವುದು ಗಮನಕ್ಕೆ ಬಂದಿತ್ತು. ಇಂಥ ಚಟುವಟಿಕೆಗಳಿಂದ ಪರಿಸರ ಪ್ರವಾಸೋದ್ಯಮಕ್ಕೂ ಅನಾನುಕೂಲವಾಗುವುದನ್ನು ಮನಗಂಡು ಜಿಲ್ಲಾಡಳಿತ ಕಠಿಣ ನಿರ್ಧಾರವೊಂದನ್ನು ಪ್ರಕಟಿಸಿದೆ.
ಕಾರವಾರದ ಸಹಾಯಕ ಕಮಿಶನರ್, ತಹಶೀಲ್ದಾರ್ ನೇತ್ರತ್ವದ ತಂಡ ಏಪ್ರಿಲ್ 4ರ ಸಂಜೆ ಮೊದಲ ಕಾರ್ಯಾಚರಣೆ ನಡೆಸಿ 9 ಜನರ ವಿರುದ್ಧ ಪ್ರಕರಣ ದಾಖಲಿಸಿದೆ. ಸಾಂಕೇತಿಕವಾಗಿ 3100ರೂ ದಂಡವನ್ನು ವಸೂಲಿ ಮಾಡಿದ್ದು, ಎಲ್ಲರಿಗೂ ಎಚ್ಚರಿಕೆ ನೀಡಿ ಬಿಡಲಾಗಿದೆ. `ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ, ಅನುಚಿತ ವರ್ತನೆ ಸೇರಿ ಪರಿಸರಕ್ಕೆ ಹಾನಿ ಮಾಡುವವರಿಗೆ ಮೊದಲು ದಂಡ ವಿಧಿಸಲಾಗುತ್ತದೆ. ಮತ್ತೆ ಅದೇ ರೀತಿ ತಪ್ಪು ಮಾಡಿದರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ’ ಎಂದು ಜಿಲ್ಲಾಡಳಿತ ಸಂದೇಶ ರವಾನಿಸಿದೆ.







