ಮಹಿಳೆಯನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಲು ಯತ್ನಿಸಿ, ಜೀವ ಬೆದರಿಕೆ ಹಾಕಿದ ಆರೋಪಿಗೆ ಶಿರಸಿ ನಗರದ 1 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.
ತಾಲೂಕಿನ ಹುಣಸೆಮನೆಯ ನಾಗೇಶ (ನಾಗರಾಜ) ನಾರಾಯಣ ಸಿದ್ದಿಯ ತಾಯಿ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಅವರ ಆರೈಕೆ ಮಾಡಲು ಸಂಬಂಧಿಯೇ ಆಗಿರುವ ಮಹಿಳೆ ಬಂದಿದ್ದರು. ಆ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ,ಕೊಲೆಗೆ ಯತ್ನಿಸಿದ್ದ.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಅಂದಿನ ಯಲ್ಲಾಪುರ ಸಿಪಿಐ ಸುರೇಶ ಯಳ್ಳೂರು ತನಿಖೆಯನ್ನು ಕೈಗೊಂಡು ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಪಬ್ಲಿಕ್ ಪ್ರೊಸಿಕ್ಯೂಟರ್ ರಾಜೇಶ್.ಎಂ.ಮಳಗಿಕರ್ ವಾದ ಮಂಡಿಸಿ, ನೊಂದ ಮಹಿಳೆಗೆ ನ್ಯಾಯ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ನ್ಯಾಯಾಧೀಶರಾದ ಕಿರಣ ಕಿಣಿ ಅವರು ಆರೋಪಿಗೆ 10 ವರ್ಷಗಳ ಸದಾ ಕಾರಾಗೃಹ ಶಿಕ್ಷೆ ಮತ್ತು 15000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಆರೋಪಿತನು ನೊಂದ ಮಹಿಳೆಗೆ 25000 ಪರಿಹಾರ ರೂಪದಲ್ಲಿ ನೀಡುವಂತೆ ಶಿಕ್ಷೆ ವಿಧಿಸಿದ್ದಾರೆ. ಮಹಿಳೆಯು ಜಿಲ್ಲಾ ಉಚಿತ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಪಡೆಯಬಹುದೆಂದು ತೀರ್ಪು ನೀಡಿದ್ದಾರೆ.







