ಸಿದ್ದಾಪುರ ತಾಲೂಕಿನ ಬಾಳೆಸರದಲ್ಲಿ ಶ್ರೀ ಮಲ್ಲಿಕಾರ್ಜುನ ಸೇವಾ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಗಡೆ ತಂಗಾರಮನೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅಧ್ಯಕ್ಷರು, ಸಂಘವು ಕಳೆದ ಆರ್ಥಿಕ ಸಾಲಿನಲ್ಲಿ 32.73 ಲಕ್ಷ ರೂ ಲಾಭ ಗಳಿಸಿದೆ. ಶೇರು ಸದಸ್ಯರಿಗೆ ಶೇ.10 ರಷ್ಟು ಲಾಭಾಂಶ ಘೋಷಣೆ ಮಾಡಲಾಗಿದೆ. ಕಿರಾಣಿ ವ್ಯವಹಾರ ಮಾಡುವವರಿಗೆ ಶೇ.2.5 ಬೋನಸ್, ಮಹಸೂಲು ವಿಕ್ರಿಗೆ ಪ್ರತಿ ಕ್ವಿಂಟಲ್ ಗೆ 80 ರೂ ವಿಕ್ರಿ ರಿಬೇಟ್ ಕೊಡಲಾಗಿದೆ ಎಂದು ತಿಳಿಸಿದರು.
ಸಂಘದ ಅಢಾವೆ ಪತ್ರಿಕೆಯಲ್ಲಿ ವ್ಯತ್ಯಾಸವಿದೆ ಎಂದು ಪತ್ರಿಕೆಗಳಲ್ಲಿ ಬಂದ ವರದಿಯ ಬಗ್ಗೆ ಸ್ಪಷ್ಟನೆ ನೀಡಿದ ಮುಖ್ಯಕಾರ್ಯನಿರ್ವಾಹಕ ಜಿ.ಜಿ.ಹೆಗಡೆ, ಅಢಾವೆಯಲ್ಲಿ, ಆಡಿಟ್ ವರದಿಯಲ್ಲಿ ಯಾವುದೇ ದೋಷ ಇಲ್ಲ. ಬಳಕೆ ಸಾಲ ಮತ್ತು ವಿಕ್ರಿ ಠೇವು ಖಾತೆ ತಂತ್ರಾಂಶದಲ್ಲಿ ಒಂದೇ ಶೀರ್ಷಿಕೆಯಲ್ಲಿ ವ್ಯವಹರಿಸುತ್ತಿದ್ದು, ಠೇವು ಖಾತೆ ಜಮಾ ಬಾಕಿಯನ್ನು ಜಮಾ ಬಾಕಿಯಲ್ಲಿಯೂ, ಆಸಾಮಿ ಸಾಲ ಬಾಕಿಯನ್ನು ಖರ್ಚು ಬಾಕಿಯಲ್ಲಿಯೂ ತೋರಿಸಬೇಕಾಗುತ್ತದೆ.
ವರ್ಷಾಖೈರಿಗೆ ಅಢಾವೆಯನ್ನು ತಯಾರಿಸುವಾಗ ಆರಂಭದ ಜಮಾಬಾಕಿ ಹಾಗೂ ಆಸಾಮಿ ಸಾಲದ ಖರ್ಚು ಬಾಕಿ ಸಮನ್ವಯಗೊಳಿಸಿದಾಗ ಠೇವು ಖಾತೆಯಲ್ಲಿರುವ ಶಿಲ್ಕನ್ನು ಜಮಾಬಾಕಿಯಲ್ಲಿಯೂ, ಖರ್ಚು ಬಾಕಿಯಲ್ಲಿರುವ ಸಾಲವನ್ನು ಸಾಲಬಾಕಿಯಲ್ಲಿಯೂ ತೋರಿಸುತ್ತಿದೆ. ಇದನ್ನು ಸಮನ್ವಯಗೊಳಿಸಿದಾಗ ಅಢಾವೆಯು ಜಮಾಬಾಕಿ ಮತ್ತು ಖರ್ಚುಬಾಕಿ ಎರಡನ್ನೂ ಪ್ರತಿಬಿಂಬಿಸುತ್ತದೆ. ಈ ಜಮಾ ಖರ್ಚು ಖಾತೆ ಬಾಕಿಯು ತಾಳೆಯಾಗಿದ್ದು, ಧೃಢೀಕರಿಸಲಾಗಿದೆ.
ಎರಡು ದಶಕಗಳಿಂದಲೂ ಇದೇ ಕ್ರಮ ರೂಢಿಯಲ್ಲಿದೆ. ಈ ಸಮನ್ವಯ ಅಂಶ ಅರ್ಥವಾಗದೇ ಅಪಪ್ರಚಾರ ಮಾಡಲಾಗುತ್ತಿದೆ. ಲೆಕ್ಕಪತ್ರ ನಿರ್ವಹಣೆಯ ಈ ಅಂಶ ಅರಿಯದೇ ದೂರಿರುವುದು ಸರಿಯಲ್ಲ ಎಂದರು.
ವರದಿಯ ಬಗ್ಗೆ ಗೊಂದಲ ಮೂಡಿಸಿ, ಅಪಪ್ರಚಾರ ಮಾಡಿದವರ ವಿರುದ್ಧ ಕ್ರಮಕ್ಕಾಗಿ ಸಭೆ ಒಕ್ಕೊರಲಿನಿಂದ ಆಗ್ರಹಿಸಿತು.
ಹೊಸಗದ್ದೆ ಶಾಖೆಯಲ್ಲಿ ನೂತನ ಕಟ್ಟಡ ನಿರ್ಮಾಣದ ಅಗತ್ಯತೆ ಬಗ್ಗೆ ಈಶ್ವರ ಭಟ್ಟ ಹಸರಗೋಡ ಪ್ರಸ್ತಾಪಿಸಿದರು. ಇದಕ್ಕೆ ಸರ್ವಾನುಮತದ ಒಪ್ಪಿಗೆ ದೊರೆಯಿತು.
ಸಂಘದ ಹಾಗೂ ಸದಸ್ಯರ ಹಿತಾಸಕ್ತಿಗೆ, ಅಧ್ಯಕ್ಷರು ಹಾಗೂ ಮುಖ್ಯಕಾರ್ಯನಿರ್ವಾಹಕರಿಗೆ ಧಕ್ಕೆ ತರುತ್ತಿರುವ, ಸುಳ್ಳು ಸುದ್ದಿ ಹಬ್ಬಿಸುತ್ತಿರುವ, ಸದಸ್ಯರ ವ್ಯವಹಾರಗಳನ್ನು ವಾಟ್ಸಪ್ ಮೂಲಕ ಬಹಿರಂಗಪಡಿಸುವ, ಸದಸ್ಯರ ವ್ಯವಹಾರಕ್ಕೆ ತೊಂದರೆ ಕೊಡುವ ಮಂಜುನಾಥ ಹೆಗಡೆ ಹೊನ್ನೇಸರ ಹಾಗೂ ನಾರಾಯಣ ಹೆಗಡೆ ಬಾಳೇಸರ ಅವರನ್ನು ಸದಸ್ಯತ್ವದಿಂದ ಉಚ್ಛಾಟಿಸಬೇಕು. ಅವರ ವಿರುದ್ಧ ಕಾನೂನು ರೀತಿ ಮಾನನಷ್ಟ ಮೊಕದ್ದಮೆ ಮತ್ತು ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಸಭೆಯು ಒಕ್ಕೊರಲಿನಿಂದ ಆಗ್ರಹಿಸಿತು. ಸರ್ವಾನುಮತದಿಂದ ಠರಾವು ಪಾಸು ಮಾಡಲಾಯಿತು.







