ಇವಿಎಂ ಮತಯಂತ್ರಗಳ ನಿಷೇಧದ ಬಗ್ಗೆ ತಜ್ಞರು ವ್ಯಾಖ್ಯಾನ ಮಾಡಬಹುದೇ ಹೊರತು ಈ ಕಾಂಗ್ರೆಸ್ಸಿಗರಂತೂ ಖಂಡಿತವಾಗಿ ಅಲ್ಲ. ಯಾಕೆಂದರೆ, ನಮ್ಮ ದೇಶಕ್ಕೆ ಈ ಯಂತ್ರಗಳನ್ನು ತಂದವರೇ ಕಾಂಗ್ರೆಸಿಗರು ಎಂದು ಬಿಜೆಪಿ ಮುಖಂಡ ರಾಮು ನಾಯ್ಕ ಹೇಳಿದ್ದಾರೆ.
ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಇವಿಎಂ (ಇಲೆಕ್ಟ್ರೋನಿಕ್ ಓಟಿಂಗ್ ಮಷಿನ್) ಪರಿಚಯಿಸಿದ್ದು 1970 ರಲ್ಲಿ. ಆಗಿನ ಪ್ರಧಾನಿ ಕಾಂಗ್ರೆಸ್ ಪಕ್ಷದ ಇಂದಿರಾ ಗಾಂಧಿಯವರು. 1982 ರಲ್ಲಿ ಮೊಟ್ಟ ಮೊದಲ ಬಾರಿ ಇವಿಎಂ ಯಂತ್ರದ ಪ್ರಾಯೋಗಿಕ ಬಳಕೆ ಮಾಡಲಾಯಿತು. ಕೇರಳ ರಾಜ್ಯದ ಪೆರುಮಾರ ಕ್ಷೇತ್ರದ ಉಪಚುನಾವಣೆಯಲ್ಲಿ. ಆಗ ಅಧಿಕಾರದಲ್ಲಿ ಇದ್ದವರೂ ಇಂದಿರಾಗಾಂಧಿಯವರೇ.
1988 ರಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಈ ಮತಯಂತ್ರದ ಬಳಕೆಗೆ ಲೋಕಸಭೆಯಲ್ಲಿ ಅಧಿಕೃತವಾಗಿ ಕಾನೂನು ಮಾನ್ಯತೆ ನೀಡಲಾಯಿತು. ಆಗ ಪ್ರಧಾನಮಂತ್ರಿ ಆಗಿದ್ದವರು ಕಾಂಗ್ರೆಸ್ ನ ದಿವಂಗತ ರಾಜೀವ ಗಾಂಧಿ. ನಾಲ್ಕು ವರ್ಷಗಳ ನಂತರ 1992 ರಲ್ಲಿ, ಭಾರತದ ಚುನಾವಣಾ ಅಧಿನಿಯಮಕ್ಕೆ ಬದಲಾವಣೆ ತಂದು ಅಧಿಕೃತವಾಗಿ ದೇಶದಲ್ಲಿ ಇವಿಎಂ ಮತ ಪದ್ದತಿಯನ್ನು ಜಾರಿಗೆ ತರಲಾಯಿತು. ಆಗ ಪ್ರಧಾನಮಂತ್ರಿ ಆಗಿದ್ದವರು ಕಾಂಗ್ರೆಸ್ ನ ಪಿ.ವಿ. ನರಸಿಂಹರಾವ್.
ಲೋಕಸಭೆಯಲ್ಲಿ ಅಂಗೀಕೃತಗೊಂಡ ನಂತರ 1998 ರಲ್ಲಿ ಮೊದಲ ಬಾರಿ ಈ ಮತಯಂತ್ರಗಳನ್ನು ರಾಜಸ್ಥಾನ, ಮಧ್ಯಪ್ರದೇಶ ಹಾಗೂ ದೆಹಲಿ ವಿಧಾನಸಭೆ ಚುನಾವಣೆಗಳಲ್ಲಿ ಪ್ರಾಯೋಗಿಕವಾಗಿ ಬಳಸಲಾಯಿತು. ಆಗ ಪ್ರಧಾನಮಂತ್ರಿ ಆಗಿದ್ದವರು, ಇದೇ ಕಾಂಗ್ರೆಸ್ ಬೆಂಬಲಿತ ಐ.ಕೆ. ಗುಜ್ರಾಲ.
2004 ರಲ್ಲಿ ತಮಿಳುನಾಡು, ಕೇರಳ, ಪುದುಚೇರಿ, ಪ.ಬಂಗಾಳ ಈ 4 ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಇವಿಎಂ ಮತಯಂತ್ರಗಳನ್ನು ಸಾರ್ವತ್ರಿಕವಾಗಿ ಬಳಸಲಾಯಿತು. ಆಗ ಪ್ರಧಾನಮಂತ್ರಿಯಾಗಿದ್ದವರು ಬಿಜೆಪಿಯ ದಿ. ಅಟಲ್ ಬಿಹಾರಿ ವಾಜಪೇಯಿಯವರಾದರೂ ಈ ನಾಲ್ಕೂ ರಾಜ್ಯಗಳಲ್ಲಿ ಚುನಾವಣೆ ಗೆದ್ದು ಆಡಳಿತಕ್ಕೆ ಬಂದವರು ಬಿಜೆಪಿಯೇತರ ಪ್ರತಿ ಪಕ್ಷಗಳು. ಕಾಂಗ್ರೆಸ್ ಆರೋಪಿಸುವಂತೆ ಬಿಜೆಪಿಯವರು ಕೈಯಾಡಿಸುವರಾಗಿದ್ದರೆ, ಅಲ್ಲಿಯ ಫಲಿತಾಂಶವನ್ನೂ ಏರುಪೇರು ಮಾಡಬಹುದಿತ್ತಲ್ಲವೇ ಎಂದು ರಾಮು ನಾಯ್ಕ ಪ್ರಶ್ನಿಸಿದ್ದಾರೆ.
2004 ರಲ್ಲಿ ಮೊಟ್ಟ ಮೊದಲ ಬಾರಿ ಲೋಕಸಭೆ ಚುನಾವಣೆಯಲ್ಲಿ ಸಾರ್ವತ್ರಿಕವಾಗಿ 543 ಕ್ಷೇತ್ರಗಳಲ್ಲೂ ಇವಿಯಂ ಮತಯಂತ್ರಗಳನ್ನು ಬಳಸಲಾಯಿತು. ಆಗಲೂ ಅಧಿಕಾರದಲ್ಲಿದ್ದವರು ಬಿಜೆಪಿಯ ವಾಜಪೇಯಿ. ಆದರೆ ಅಲ್ಲಿಯೂ ಗೆದ್ದಿದ್ದು ಕಾಂಗ್ರೆಸ್ ಹಾಗೂ ಮುಂದಿನ ಪ್ರಧಾನಮಂತ್ರಿಯಾದವರು ಇದೇ ಕಾಂಗ್ರೆಸ್ಸಿನ ಡಾ. ಮನಮೋಹನ ಸಿಂಗ್.
2004 ರಿಂದ 2014 ವರೆಗೆ 10 ವರ್ಷದ ಕಾಂಗ್ರೆಸ್ ಆಡಳಿತದಲ್ಲಿ, ದೇಶದ ಸ್ಥಳೀಯ ಸಂಸ್ಥೆಗಳಿಂದ ಹಿಡಿದು ವಿಧಾನಸಭೆ, ಲೋಕಸಭೆವರೆಗೆ ಎಲ್ಲ ಚುನಾವಣೆಗಳಲ್ಲೂ ಇವಿಯಂ ಮತಯಂತ್ರಗಳನ್ನು ಯಥೇಚ್ಛವಾಗಿ ಬಳಕೆ ಮಾಡಲಾಯಿತು. ಅತಿ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಕೇವಲ ಎರಡು ವರ್ಷಗಳ ಹಿಂದೆ, ಮೋದಿ ಆಡಳಿತದಲ್ಲಿ ನಡೆದ ಕರ್ನಾಟಕ ಹಾಗೂ ತೇಲಂಗಾಣ ವಿಧಾನಸಭಾ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿದವರೂ ಇದೇ ಕಾಂಗ್ರೆಸ್ಸಿಗರು, ಅಲ್ಲಿ ರೇವಂತ ರೆಡ್ಡಿ, ಇಲ್ಲಿ ಸಿದ್ದರಾಮಯ್ಯ. ಅಷ್ಟೇ ಅಲ್ಲ, ಕಳೆದ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿಯೂ ಕರ್ನಾಟಕದಲ್ಲಿ ಕಾಂಗ್ರೆಸ್ ಹಿಂದಿನ ಬಾರಿಗಿಂತ 8 ಸ್ಥಾನ ಹೆಚ್ಚು ಗೆದ್ದುಕೊಂಡಿತು.
ಇಷ್ಟೆಲ್ಲ ಕಣ್ಣ ಮುಂದಿದ್ದರೂ ಯಾವ ನೈತಿಕತೆಯಿಂದ ಈ ರಾಹುಲ್, ಸಿದ್ದರಾಮಯ್ಯ, ಖರ್ಗೆ ಇತ್ಯಾದಿ ಕಾಂಗ್ರೆಸ್ ನಾಯಕರು ಇವಿಎಂ ಯಂತ್ರಗಳಿಗೂ, ಬಿಜೆಪಿಗೂ ಥಳಕು ಹಾಕುತ್ತಾರೆ ಎಂದು ಪ್ರಶ್ನಿಸಿದ್ದಾರೆ.







