ಯಲ್ಲಾಪುರ ತಾಲೂಕಿನ ಚಂದಗುಳಿಯ ಯುಕೆ ನೇಚರ್ ಸ್ಟೇಯಲ್ಲಿ ನಾದಾವಧಾನ ಸಂಸ್ಥೆ ಹಾಗೂ ಯಕ್ಷಗಾನ ಅಕಾಡೆಮಿಯ ಸಹಯೋಗದೊಂದಿಗೆ ಮೂರು ದಿನಗಳ ಯಕ್ಷಗಾನ ಕಾರ್ಯಗಾರ ನಡೆಯಿತು. ನಾದಾವಧಾನದ ವಿದ್ಯಾರ್ಥಿಗಳು ಮತ್ತು ಸ್ಥಳೀಯವಾಗಿ ಬೆಳೆಯುವ ಪ್ರತಿಭೆಗಳಿಗಾಗಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಹಿರಿಯ ಅರ್ಥಧಾರಿ ಎಂ.ಎನ್ ಹೆಗಡೆ ಹಳವಳ್ಳಿ, ಯಕ್ಷರಂಗ ಪತ್ರಿಕೆಯ ಸಂಪಾದಕ ಕಡತೋಕ ಗೋಪಾಲಕೃಷ್ಣ ಭಾಗವತ ಶಿಬಿರಗಳ ಅಗತ್ಯ ಮತ್ತು ಮಹತ್ವಗಳ ಕುರಿತು ಮಾತನಾಡಿದರು. ನಾದಾವಧಾನ ಸಂಸ್ಥೆಯ ಈ ಕಾರ್ಯದ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು
ಯಕ್ಷಗಾನ ಅಕಾಡೆಮಿ ಸದಸ್ಯ ವಿದ್ಯಾಧರ ರಾವ್ ಜಲವಳ್ಳಿ, ಇಂತಹ ಕಾರ್ಯಾಗಾರಕ್ಕೆ ಅಕಾಡೆಮಿಯ ಸಂಪೂರ್ಣ ಬೆಂಬಲ ಇದೆ ಎಂದರು. ನಾದಾವಧಾನದ ಗುರುಗಳಾದ ಎ.ಪಿ.ಫಾಟಕ್,NG ಹೆಗಡೆ, ಅಶ್ವಿನಿ ಕೊಂಡದಕುಳಿಯವರು ಸಭೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಭಾಗವತವ ಅನಂತ ಹೆಗಡೆ ದಂತಳಿಗೆ ಯಕ್ಷಗಾನ ಕಾವ್ಯದಲ್ಲಿ ಬರುವ ಸಾಹಿತ್ಯದ ಸೌಂದರ್ಯ ,ಛಂದೋಭಂಗವಾಗದಂತೆ ಹಾಡುವ,ಕಾವ್ಯ ಕಟ್ಟುವ ಕುರಿತು ವಿವರಿಸಿದರು. ಕಲಾವಿದರಾದ ಸದಾಶಿವ ಮಲವಳ್ಳಿ, ನಾಗರಾಜ ಕುಂಕಿಪಾಲ ಇವರು ಯಕ್ಷಗಾನದ ರಂಗದ ಚಲನೆ, ಆಗಮನ ನಿರ್ಗಮನಗಳ ಕುರಿತು ವಿವರಿಸುತ್ತಾ ಕೆಲವು ಆಖ್ಯಾನಗಳನ್ನು ಆಡಿ ತೋರಿಸಿದರು.
ಅರ್ಥಧಾರಿ ಶಿವರಾಮ ಭಾಗವತ ಪ್ರಸಂಗ ಸಾಹಿತ್ಯವನ್ನು ಓದಿ ಅರ್ಥ ವಿವರಿಸಿದರು. ಎ.ಪಿ.ಫಾಠಕ ಮತ್ತು ಎನ್.ಜಿ ಹೆಗಡೆ ಪದ್ಯಗಳಲ್ಲಿ ಹಾಗೂ ತಾಳಮಾಲಿಕೆಯಲ್ಲಿ ಬರುವ ಸಣ್ಣ ಮುಕ್ತಾಯ, ಅದರ ಸ್ಥಾನ, ಶಾಸ್ತ್ರೀಯತೆಯ ಕುರಿತು ವಿವರಿಸಿದರು. ಲಯದ ವಿಸ್ತರಣೆ, ಕಾಯ್ದುಕೊಳ್ಳಬೇಕಾದ ಲಯ ಇದರ ಕುರಿತ ಚರ್ಚೆಗಳು ನಡೆದವು.
ಚಂಡೆ ವಾದಕರಾದ ಗಣೇಶ ಗಾಂವ್ಕರ ಹಳವಳ್ಳಿ ಮತ್ತು ಪ್ರಸನ್ನ ಭಟ್ಟ ಹೆಗ್ಗಾರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಾದನಗಳ ಕುರಿತು ಸಂಗತಿಗಳನ್ನು ತಿಳಿಸಿದರು. ಅಶ್ವಿನಿ ಕೊಂಡದಕುಳಿ ಯಕ್ಷಗಾನದ ಶಾಸ್ತ್ರೀಯ ಸ್ಥಾನಮಾನ ಅದರ ಸಿರಿವಂತಿಕೆಯನ್ನು ಪಡೆಯುವಲ್ಲಿ ನಾವು ಪಡಬೇಕಾದ ಶ್ರಮದ ಕುರಿತು ವಿವರಿಸಿ, ನಾಟ್ಯದ ಬಗ್ಗೆ ತಿಳಿಸಿಕೊಟ್ಟರು. ಪ್ರಾಥಮಿಕ ಅಭ್ಯಾಸಕ್ಕೆ ಹೆಜ್ಜೆಗಳ ಪ್ರಾತ್ಯಕ್ಷಿಕೆ ನಡೆಯಿತು.
ಹಿರಿಯರಾದ ಎಂ.ಎನ್ ಹೆಗಡೆ ಮತ್ತು ಡಾ.ಡಿ.ಕೆ ಗಾಂವ್ಕರ್ ಅವರು ತಾಳಮದ್ದಳೆಯ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ನಾದಾವಧಾನದ ವಿದ್ಯಾರ್ಥಿಗಳೇ ಹಿಮ್ಮೇಳದಲ್ಲಿ ಭಾಗವಹಿಸಿದ್ದರು. ಯಕ್ಷಗಾನ ಪ್ರೋತ್ಸಾಹಕ ಸುಬ್ರಾಯ ಭಟ್ಟ ಗುಳ್ಳಾಪುರ, ಯು.ಕೆ ನೇಚರ್ ಸ್ಟೇ ಮುಖ್ಯಸ್ಥ ನಿರಂಜನ ಭಟ್ಟ ಉಪಸ್ಥಿತರಿದ್ದರು.







