ಮಾವಿನಮನೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು ಕಳೆದ ಸಾಲಿನಲ್ಲಿ 52.28 ಲಕ್ಷ ರೂ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸುಬ್ರಾಯ ಕೃಷ್ಣ ಬೋಳ್ಮನ ಹೇಳಿದರು.
ಅವರು ಯಲ್ಲಾಪುರ ತಾಲೂಕಿನ ಮಲವಳ್ಳಿಯ ಶ್ರೀ ರಾಮಲಿಂಗೇಶ್ವರ ಸಭಾಭವನದಲ್ಲಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಮೂಲಕ ಅಡಕೆ, ಕಾಳುಮೆಣಸು ವಿಕ್ರಿ ಮಾಡಿದವರಿಗೆ 18.70 ಲಕ್ಷ ರೂ, ಕಿರಾಣಿ ಗ್ರಾಹಕರಿಗೆ 2.09 ಲಕ್ಷ ರೂ ಪ್ರೋತ್ಸಾಹಧನ ನೀಡಿದ್ದೇವೆ ಎಂದರು.
ಸದಸ್ಯರು ಸಂಘದ ಮೂಲಕವೇ ವ್ಯವಹರಿಸಿದರೆ ಅವರ ಬೆಳವಣಿಗೆ ಮತ್ತು ಸಂಘದ ಪ್ರಗತಿಯೂ ಸಾಧ್ಯವೆಂದರು.
ಟಿಎಂಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಪತ್ತು ಮತ್ತು ಮಾರಾಟ ಜೋಡಣೆಯಲ್ಲಿ ಸಹಕಾರಿ ಸಂಘಗಳು ಇನ್ನಷ್ಟು ಅಭಿವೃದ್ಧಿ ಹೊಂದಬೇಕು. ಸಹಕಾರಿ ಸಂಘಗಳು ಕೃಷಿಕರಿಗೆ ಸದಾ ಸಹಕಾರಿಯಾಗಿ ನಿಂತಿವೆ ಎಂದರು.
ಕಳಚೆಯ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ ಮಾತನಾಡಿ, ಸದಸ್ಯರು ಸಹಕಾರಿ ಸಂಘದಲ್ಲೇ ಹೆಚ್ಚಿನ ವ್ಯವಹಾರ ನಡೆಸಬೇಕು ಎಂದರು.
ಗ್ರಾ.ಪಂ ಅಧ್ಯಕ್ಷ ಸುಬ್ಬಣ್ಣ ಕುಂಟೆಗುಳಿ, ಸಂಘದ ಉಪಾಧ್ಯಕ್ಷ ರವಿ ಹುಳಸೆ ಹಾಗೂ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಾಹಕ ದತ್ತಾತ್ರೇಯ ಗಾಂವ್ಕರ ನೆಲೆಪಾಲ ವರದಿ ವಾಚಿಸಿದರು.
ನಂತರ ಯಕ್ಷ ರಾಘವ ಜನ್ಸಾಲೆ ತಂಡದಿಂದ ಪ್ರದರ್ಶನಗೊಂಡ ಶ್ವೇತಕುಮಾರ ಚರಿತ್ರೆ ಯಕ್ಷಗಾನ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಈ ಸಂದರ್ಭದಲ್ಲಿ ಖ್ಯಾತ ಭಾಗವತ ರಾಘವೇಂದ್ರ ಆಚಾರಿ ಜನ್ಸಾಲೆ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.







