ಯಲ್ಲಾಪುರ ತಾಲೂಕಿನ ಡೋಮಗೇರಿ ಬಳಿ ಮರ ಬಿದ್ದು ಇಬ್ಬರು ಮೃತಪಟ್ಟು, ಮೂವರು ಮಕ್ಕಳು ಗಾಯಗೊಂಡ ಘಟನೆ ಎಲ್ಲರನ್ನು ಆಘಾತಗೊಳಿಸಿದೆ. ಈ ನಡುವೆ ಡೊಮಗೇರಿ ಗೌಳಿವಾವಡಾದಲ್ಲಿ ಅಂಗನವಾಡಿಯಂತಹ ಅಗತ್ಯ ಸೌಕರ್ಯ ಇಲ್ಲದಿರುವುದೇ ಇಂತಹ ಅವಾಂತರಗಳಿಗೆ ಕಾರಣವೆಂಬ ಆರೋಪ ಕೇಳಿ ಬಂದಿದೆ.
ಡೋಮಗೇರಿಯ ಗೌಳಿಡಾದಲ್ಲಿ ಸುಮಾರು 30 ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿ ಅಂಗನವಾಡಿಗೆ ಹೋಗುವ 10 ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಆದರೆ ಗೌಳಿವಾಡಾದಲ್ಲಿ ಅಂಗನವಾಡಿ ಇಲ್ಲ. ಹಾಗಾಗಿ ಎರಡು ಕಿಮೀ ದೂರದಲ್ಲಿರುವ ಡೋಮಗೇರಿಗೆ ಈ ಮಕ್ಕಳು ನಿತ್ಯವೂ ಹೋಗುತ್ತಾರೆ.
ಪ್ರತಿದಿನ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವುದು, ಮತ್ತೆ ಮರಳಿ ಕರೆತರುವುದು ಪಾಲಕರಿಗೊಂದು ಕೆಲಸವಾಗಿದೆ. ಹಾಗೆ ಮಕ್ಕಳನ್ನು ಅಂಗನವಾಡಿಯಿಂದ ಮನೆಗೆ ಕರೆ ತರುವ ಸಂದರ್ಭದಲ್ಲಿಯೇ ಈ ದುರ್ಘಟನೆ ಸಂಭವಿಸಿದೆ.
ಡೋಮಗೇರಿ ಗೌಳಿವಾಡಾದಲ್ಲಿಯೇ ಅಂಗನವಾಡಿ ಇದ್ದರೆ ಇಂತಹ ದುರ್ಘಟನೆ ಸಂಭವಿಸುತ್ತಿರಲಿಲ್ಲ. ಇನ್ನಾದರೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು, ಗೌಳಿವಾಡದಲ್ಲಿ ಒಂದು ಅಂಗನವಾಡಿ ಆರಂಭಿಸಬೇಕು. ಅಲ್ಲಿನ ಮಕ್ಕಳಿಗೆ ಊರಿನಲ್ಲಿಯೇ ವ್ಯವಸ್ಥೆ ಕಲ್ಪಿಸಬೇಕು ಎಂದು ಗೌಳಿ ಸಮುದಾಯದ ಮುಖಂಡ ದೋಂಡು ಪಾಟೀಲ ಆಗ್ರಹಿಸಿದ್ದಾರೆ.







