ಯಲ್ಲಾಪುರ ತಾಲೂಕಿನ ಗುಳ್ಳಾಪುರ-ಹೆಗ್ಗಾರ ನೂತನ ಸೇತುವೆ ಮಂಜೂರಿಗೆ ಶ್ರಮಿಸಿದ್ದಾರೆಂಬ ಕಾರಣಕ್ಕೆ ಸೇತುವೆ ಪುನರ್ ನಿರ್ಮಾಣ ಹಕ್ಕೊತ್ತಾಯ ಸಮಿತಿಯಯವರು ಯಲ್ಲಾಪುರದಲ್ಲಿ ಶಾಸಕ ಶಿವರಾಮ ಹೆಬ್ಬಾರ ಅವರನ್ನು ಭೇಟಿ ಮಾಡಿ, ಗೌರವಿಸಿ, ಅಭಿನಂದಿಸಿದರು.
ಇತ್ತೀಚೆಗಷ್ಟೇ ಸೇತುವೆ ಮಂಜೂರಿಯಲ್ಲಿ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅವರ ಶ್ರಮ ಹೆಚ್ಚಿನದು ಎಂದು ಹಳಿಯಾಳಕ್ಕೆ ಹೋಗಿ ಇದೇ ಸಮಿತಿಯ ಪ್ರಮುಖರು ದೇಶಪಾಂಡೆ ಅವರನ್ನು ಅಭಿನಂದಿಸಿದ್ದರು. ಇದು ಸೇತುವೆ ಮಂಜೂರಿಗೆ ಸಂಬಂಧಿಸಿದಂತೆ ಇಬ್ಬರುಇ ಮುಖಂಡರ ಬೆಂಬಲಿಗರ ನಡುವೆ ಕ್ರೆಡಿಟ್ ವಾರ್ ಗೆ ಕಾರಣವಾಗಿತ್ತು.
ಅದೇ ಸಮಿತಿಯಿಂದ ಈ ದಿನ ಹೆಬ್ಬಾರ ಅವರನ್ನು ಅಭಿನಂದಿಸಲಾಗಿದೆ. ದೇಶಪಾಂಡೆಯವರನ್ನು ಅಭಿನಂದಿಸಿದ ಬಹುತೇಕ ಪ್ರಮುಖರು ಇಲ್ಲೂ ಉಪಸ್ಥಿತರಿರುವುದು ವಿಶೇಷ.
ಹೆಬ್ಬಾರ ಅವರನ್ನು ಅಭಿನಂದಿಸುವ ವೇಳೆ ಇಡಗುಂದಿ ಗ್ರಾ.ಪಂ ಅಧ್ಯಕ್ಷ ಶ್ರೀಕಾಂತ ಶೆಟ್ಟಿ, ಹಕ್ಕೊತ್ತಾಯ ಸಮಿತಿಯ ಪ್ರಮುಖರಾದ ಹೆಗ್ಗಾರ ಪುನರ್ವಸತಿ ಪ್ರದೇಶದ ಅಶೋಕ ಗಾಂವ್ಕಾರ್, ಪ್ರಭಾಕರ ಕಲಗಾರೆ, ವಿ.ಎನ್ ಭಟ್ಟ, ಜಯಪ್ರಕಾಶ ಗಾಂವ್ಕಾರ್, ಗ್ರಾಮದ ಹಿರಿಯ ಮಾ.ಶಂ.ಭಟ್ಟ ಜಾಯಕಾಯಿಮನೆ ಇದ್ದರು.
ಸೇತುವೆಗೆ ಅನುದಾನ ಮಂಜೂರಿಯ ನಿರ್ಣಯವಾದ ಮಾರನೇ ದಿನವೇ ಹಳಿಯಾಳಕ್ಕೆ ಹೋಗಿ ದೇಶಪಾಂಡೆಯವರನ್ನು ಅಭಿನಂದಿಸಿದ್ದ ಸಮಿತಿ, ಹೆಬ್ಬಾರ ಅವರನ್ನು ಅಭಿನಂದಿಸಲು ಇಷ್ಟು ದಿನ ವಿಳಂಬ ಮಾಡಿದ್ದೇಕೆ ಎಂಬ ಪ್ರಶ್ನೆ ಸಹಜವಾಗಿ ಮೂಡುವಂತಿದೆ. ಈ ಅಭಿನಂದನೆಯ ಹಿನ್ನೆಲೆಯ ಬಗ್ಗೆಯೂ ಕುತೂಹಲ ಮೂಡುವಂತಿದೆ.







