ಯಲ್ಲಾಪುರ ತಾಲೂಕಿನ ಚಂದಗುಳಿ ಹಾಗೂ ನಂದೊಳ್ಳಿ ಗ್ರಾ.ಪಂ ವ್ಯಾಪ್ತಿಯ ವಿವಿಧ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಸ್ಥಳೀಯ ಬಿಜೆಪಿ ಘಟಕಗಳ ನೇತೃತ್ವದಲ್ಲಿ ಗ್ರಾಮಸ್ಥರು ಲೋಕೋಪಯೋಗಿ ಹಾಗೂ ಪಂಚಾಯತರಾಜ್ ಇಂಜನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಚಂದಗುಳಿ ಗ್ರಾ.ಪಂ ವ್ಯಾಪ್ತಿಯ ಎಪಿಎಂಸಿ-ಗುಂಡ್ಕಲ್ ರಸ್ತೆ, ಮಳಲಗಾಂವ-ಚಂದಗುಳಿ ರಸ್ತೆ, ನಂದೊಳ್ಳಿ ಗ್ರಾ.ಪಂ ವ್ಯಾಪ್ತಿಯ ಮಾಗೋಡ ಕ್ರಾಸ್-ಜೇನುಕಲ್ಲುಗುಡ್ಡ ರಸ್ತೆಯ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಜಿ.ಪಂ ಇಂಜನಿಯರಿಂಗ್ ವಿಭಾಗದ ಕಚೇರಿಗೆ ಭೇಟಿ ನೀಡಿ, ಚಂದಗುಳಿ ಗ್ರಾ.ಪಂ ವ್ಯಾಪ್ತಿಯ ಹುತ್ಕಂಡ್ ಕ್ರಾಸ್-ಜೂಜಿನಬೈಲ್ ಕೂಡು ರಸ್ತೆ ಕಾಂಕ್ರೀಟ್ ರಸ್ತೆ ನಿರ್ಮಾಣ, ನಂದೊಳ್ಳಿ ಗ್ರಾ.ಪಂ ವ್ಯಾಪ್ತಿಯ ನಂದೊಳ್ಳಿ-ಅಣಲಗಾರ ರಸ್ತೆಯ ದುರಸ್ತಿ ಬಗ್ಗೆ ಶೀಘ್ರ ಕ್ರಮಕ್ಕಾಗಿ ಒತ್ತಾಯಿಸಿದರು.
ಈ ಎಲ್ಲ ರಸ್ತೆಗಳ ದುರಸ್ತಿಗೆ ಕ್ರಮ ಆಗದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿದರು.
ಬಿಜೆಪಿ ಘಟಕದ ಪ್ರಮುಖರಾದ ನಾಗರಾಜ ಕವಡಿಕೆರೆ, ಸುಬ್ಬಣ್ಣ ಉದ್ದಾಬೈಲ, ಅಪ್ಪು ಆಚಾರಿ, ಗ್ರಾಮಸ್ಥರಾದ ಸುಬ್ರಾಯ ಭಟ್ಟ ಗುಂಡ್ಕಲ್, ನರಸಿಂಹ ಭಾಗ್ವತ ಗುಂಡ್ಕಲ್, ಗಣಪತಿ ಭಟ್ಟ ಕವಡಿಕೆರೆ, ಬಾಲಚಂದ್ರ ಭಟ್ಟ ಭಟ್ರಕೇರಿ, ಸುಬ್ರಹ್ಮಣ್ಯ ಭಾಗ್ವತ ಗುಡ್ನಮನೆ, ನಾರಾಯಣ ಭಟ್ಟ ಶಿರವಳ್ಳಿ ಇತರರಿದ್ದರು.







