ಯಲ್ಲಾಪುರದ ಬಸ್ ನಿಲ್ದಾಣದ ಎದುರು ಬೆಲ್ ರಸ್ತೆಯ ಪಕ್ಕ ಇರುವ ಗೂಡಂಗಡಿಕಾರರು ರಸ್ತೆಯನ್ನು ಅತಿಕ್ರಮಿಸಿ ವ್ಯಾಪಾರ ನಡೆಸುತ್ತಿರುವ ದೂರಿನ ಹಿನ್ನೆಲೆಯಲ್ಲಿ ಪ.ಪಂ ಅಧಿಕಾರಿಗಳು ಅಂಗಡಿಕಾರರಿಗೆ ಎಚ್ಚರಿಕೆ ನೀಡಿದರು.
ಬೆಲ್ ರಸ್ತೆ ಬದಿಯಲ್ಲಿದ್ದ ಅಂಗಡಿಕಾರರು ರಸ್ತೆಯನ್ನು ಅತಿಕ್ರಮಿಸಿ ವ್ಯಾಪಾರ ನಡೆಸುತ್ತಿದ್ದು, ಇದರಿಂದ ವಾಹನಗಳ, ಪಾದಾಚಾರಿಗಳ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಈ ಕುರಿತು ದೂರಿನ ಹಿನ್ನೆಲೆಯಲ್ಲಿ ಪ.ಪಂ ಆರೋಗ್ಯ ನಿರೀಕ್ಷಕ ಗುರು ಗಡಗಿ ನೇತೃತ್ವದಲ್ಲಿ ಪ.ಪಂ ಸಿಬ್ಬಂದಿ ಅಂಗಡಿಗಳ ಬಳಿ ಹೋಗಿ ಎಚ್ಚರಿಕೆ ನೀಡಿದರು.
ರಸ್ತೆಯ ಮೇಲೆ ವಾಹನಗಳಿಗೆ, ಪಾದಚಾರಿಗಳಿಗೆ ತೊಂದರೆಯಾಗದಂತೆ ವ್ಯವಹರಿಸಬೇಕು. ಇಲ್ಲವಾದರೆ ಅಂಗಡಿ ತೆರವುಗೊಳಿಸುವುದಾಗಿ ಎಚ್ಚರಿಕೆ ನೀಡಲಾಯಿತು.
ಪಟ್ಟಣ ಪಂಚಾಯಿತಿ ಅಧಿಕಾರಿಗಳ ಈ ನಡೆ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬಂತೆ ವಿಚಿತ್ರವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲೇ ಅನಧಿಕೃತವಾಗಿ ಮೀನು ವ್ಯಾಪಾರ ನಡೆಸುವವರಿಗೆ ಯಾವುದೇ ಎಚ್ಚರಿಕೆಯೂ ಇಲ್ಲ, ತೆರವಿನ ಕ್ರಮವೂ ಇಲ್ಲ. ಬೆಲ್ ರಸ್ತೆ ಬಳಿ ಹಣ್ಣು, ತರಕಾರಿಯಂತಹ ವಸ್ತುಗಳನ್ನು ಮಾರುವ ಅಂಗಡಿಕಾರರಿಗೆ ಎಚ್ಚರಿಕೆ ನೀಡುವ ಕ್ರಮದ ಹಿಂದೆ ಇರುವ ಗುಟ್ಟೇನು ಎಂಬ ಪ್ರಶ್ನೆ ಸಾರ್ವಜನಿಕರದು.







