ಯಲ್ಲಾಪುರ ತಾಲೂಕಿನ ಮಾಗೋಡ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ವೀರಮಾರುತಿ ತಾಳಮದ್ದಲೆ ಕೂಟದಿಂದ ಪ್ರಸಂಗ ಪಂಚಕ-3 ಕಾರ್ಯಕ್ರಮ ಸೆ.20 ರಂದು ನಡೆಯಲಿದೆ. ಅಂದು ಸಂಜೆ 6 ರಿಂದ ಮಾರನೇ ದಿನ ಬೆಳಗ್ಗೆ 6 ರವರೆಗೆ ನಿರಂತರವಾಗಿ 12 ತಾಸುಗಳ ಕಾಲ ತಾಳಮದ್ದಲೆಗಳು ನಡೆಯಲಿವೆ.
ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಡೆಯುವ ಈ ಕಾರ್ಯಕ್ರಮದಲ್ಲಿ, ಈ ಬಾರಿ ಅಜಮಿಳೋಪಾಖ್ಯಾನ, ರತ್ನಾವತಿ ಕಲ್ಯಾಣ, ರಾಮಾಂಜನೇಯ, ದ್ರೌಪದಿ ಪ್ರತಾಪ, ಗದಾಯುದ್ಧ ಎಂಬ 5 ಪೌರಾಣಿಕ ಆಖ್ಯಾನಗಳು ಪ್ರಸ್ತುತಗೊಳ್ಳಲಿವೆ.
ಪ್ರತಿ ಪ್ರಸಂಗಕ್ಕೂ 2 ತಾಸು 20 ನಿಮಿಷಗಳ ಕಾಲಾವಕಾಶ ನಿಗದಿಪಡಿಸಲಾಗಿದೆ. ನಿರ್ದಿಷ್ಟ ಸಮಯದಲ್ಲಿ ಹಿಮ್ಮೇಳ-ಮುಮ್ಮೇಳದ ಕಲಾವಿದರು ಅಚ್ಚುಕಟ್ಟಾಗಿ ಪ್ರಸಂಗ ಪ್ರಸ್ತುತಪಡಿಸಲಿದ್ದಾರೆ. 45 ಕ್ಕೂ ಹೆಚ್ಚು ಸ್ಥಳೀಯ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿ ಎರಡು ಮಹಿಳಾ ತಂಡಗಳು ಭಾಗವಹಿಸುತ್ತಿರುವುದು ವಿಶೇಷ.
ಸಮಯ ಪಾಲನೆ, ಶಿಸ್ತು, ಆತ್ಮೀಯ ಆತಿಥ್ಯಕ್ಕೆ ಪ್ರಸಂಗ ಪಂಚಕ ಹೆಸರಾಗಿದ್ದು, ಶ್ರೀ ವೀರಮಾರುತಿ ತಾಳಮದ್ದಲೆ ಕೂಟದ ಈ ವಿನೂತನ ಕಾರ್ಯಕ್ರಮ ಮಾದರಿಯಾಗಿದೆ.
ವೀರಮಾರುತಿ ತಾಳಮದ್ದಲೆ ಕೂಟವು ಕಳೆದ ಎರಡು ವರ್ಷಗಳಿಂದ ಪ್ರಸಂಗ ಪಂಚಕ ಕಾರ್ಯಕ್ರಮ ಆಯೋಜಿಸುತ್ತ ಬಂದಿದೆ.
ಪ್ರಸಂಗದ ಆಯ್ಕೆ, ಕಲಾವಿದರಿಗೆ ಪಾತ್ರ ಹಂಚಿಕೆಯನ್ನು ಅಚ್ಚುಕಟ್ಟಾಗಿ ಮಾಡುವುದು, ಹಿಮ್ಮೇಳ, ಮುಮ್ಮೇಳದ ಪ್ರತಿ ಕಲಾವಿದರು ಸಮಯ ಪಾಲನೆಯ ನಿಯಮವನ್ನು ಕಟ್ಟುನಿಟ್ಟಾಗಿ ಅನುಸರಿಸುವುದು. ಕಲಾವಿದರು ಯಾವುದೇ ಅಪೇಕ್ಷೆ ಇಲ್ಲದೇ, ಸೇವಾ ಮನೋಭಾವನೆಯಿಂದಲೇ ಈ ಕಲಾರಾಧನೆಯಲ್ಲಿ ಭಾಗವಹಿಸುವುದು.
ಕಲಾವಿದರಿಗೆ ಮಾತ್ರವಲ್ಲದೇ ಬಂದ ಪ್ರೇಕ್ಷಕರಿಗೂ ನಿರಂತರ ಊಟ, ತಿಂಡಿ, ಪಾನೀಯದ ವ್ಯವಸ್ಥೆ.. ಹೀಗೆ ಹಲವು ಅನುಸರಣೀಯ ಸಂಗತಿಗಳ ಮೂಲಕ ಪ್ರಸಂಗ ಪಂಚಕ ವಿಶಿಷ್ಟ ಎನಿಸಿದೆ.







