ವಿಶ್ವದ ಸೃಷ್ಟಿಗೆ ಮೂಲಕ ಕಾರಣ ವಿಶ್ವಕರ್ಮರು. ಅವರ ಬದುಕು-ಆದರ್ಶಗಳನ್ನು ಎಲ್ಲರೂ ಸ್ಮರಿಸಬೇಕೆಂದು ತಹಸೀಲ್ದಾರ ಚಂದ್ರಶೇಖರ ಹೊಸ್ಮನಿ ಹೇಳಿದರು.
ಅವರು ಯಲ್ಲಾಪುರದ ಕಾಳಮ್ಮನಗರದ ಕಾಳಮ್ಮದೇವಿ ಸಭಾಭವನದಲ್ಲಿ ತಾಲೂಕು ಆಡಳಿತ, ವಿಶ್ವಕರ್ಮ ಸಮಾಜ ಅಭಿವೃದ್ಧಿ ಸಂಘ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಶ್ವಕರ್ಮ ಸಮಾಜದವರು, ವಾಸ್ತುಶಿಲ್ಪಿಗಳ ಮೂಲಪುರುಷ ವಿಶ್ವಕರ್ಮನೆಂದು ಪೂಜಿಸುತ್ತಾರೆ. ಅವರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಜತೆಗೆ ದೇಶದ ಪ್ರಗತಿಗೂ ಕೊಡುಗೆ ನೀಡಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಪ.ಪಂ ಅಧ್ಯಕ್ಷೆ ನರ್ಮದಾ ನಾಯ್ಕ ಮಾತನಾಡಿ, ವಿಶ್ವಕರ್ಮ ದೇವಲೋಕ, ಭೂಲೋಕದ ಪ್ರಮುಖ ನಗರಗಳ ನಿರ್ಮಾಣ ಮಾಡಿದ್ದಾನೆ ಎಂಬುದು ಪುರಾಣಗಳ ಉಲ್ಲೇಖ. ಇದು ಕೇವಲ ಸರ್ಕಾರಿ ಕಾರ್ಯಕ್ರಮವಾಗದೇ ಸಮಾಜದ ಸಹಭಾಗಿತ್ವದಲ್ಲಿ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಮಾದರಿಯಾಗಿದೆ. ಇನ್ನಷ್ಟು ಸಮಾಜಮುಖಿ ಕಾರ್ಯಗಳು ಸಂಘಟನೆಯಿಂದ ಆಗಲಿ ಎಂದರು.
ಕಳೆದ ವರ್ಷ ಎಸ್.ಎಲ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಎಲ್.ಎಲ್.ಬಿ, ಸಿಎಂಸಿ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಯುವ ಸಾಧಕರಾದ ಡಾ.ದೇವಿದಾಸ ಆಚಾರಿ ಹಾಗೂ ಮಾರುತಿ ಆಚಾರಿ ಅವರನ್ನು ಗೌರವಿಸಲಾಯಿತು.
ತಾಲೂಕು ವಿಶ್ವಕರ್ಮ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ನೇತ್ರಾನಂದ ಆಚಾರಿ, ಸಮಾಜದ ಮುಖಂಡ ಶ್ಯಾಮಸುಂದರ ಆಚಾರಿ ಇದ್ದರು. ಗಣೇಶ ಆಚಾರಿ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅವರ ಬದುಕಿನ ಬಗ್ಗೆ ವಿವರಿಸಿದರು.
ವಿಘ್ನೇಶ್ವರ ಆಚಾರಿ ಪ್ರಾರ್ಥಿಸಿದರು. ವೇದವ್ಯಾಸ ಆಚಾರಿ ಸ್ವಾಗತಿಸಿದರು. ಮಾರುತಿ ಆಚಾರಿ, ಪವಿತ್ರಾ ಆಚಾರಿ ನಿರ್ವಹಿಸಿದರು. ಪೂಜಾ ಆಚಾರಿ ವಂದಿಸಿದರು.







