ಯಲ್ಲಾಪುರದಲ್ಲಿ ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿರುವಂತೆ ತೋರುತ್ತಿದೆ. ತಾಲೂಕಿನ ವಿವಿಧೆಡೆ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು, ಕಳ್ಳರನ್ನು ಪತ್ತೆ ಹಚ್ಚದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಗ್ರಾಪಂ ಜನಪ್ರತಿನಿಧಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ ಕೆ ಭಟ್ಟ ಯಡಳ್ಳಿ ಹೇಳಿದರು.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಟ್ಟಣದ ಹಲವೆಡೆ ಹಾಗೂ ಇಡಗುಂದಿ,ಮಂಚಿಕೇರಿ, ಕುಂದರಗಿ ಭಾಗಗಳಲ್ಲಿ ಹಗಲು ಹಾಗೂ ರಾತ್ರಿಯ ವೇಳೆ ಕಳ್ಳತನ ನಡೆದಿದೆ. ಆದರೆ ಇನ್ನೂ ಕಳ್ಳರ ಪತ್ತೆ ಮಾಡದೇ ಇರುವುದು ಬೇಸರದ ಸಂಗತಿ. ಸಾರ್ವಜನಿಕರು ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧರಿದ್ದರೂ ಕಳ್ಳರ ಪತ್ತೆಗೆ ಮೀನ ಮೇಷ ಎಣಿಸಲಾಗುತ್ತಿದೆ ಎಂದು ದೂರಿದರು.
ಕಳೆದ ಎರಡು- ಮೂರು ತಿಂಗಳಿನಿಂದ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಕೆಲವು ದಿನಗಳ ಹಿಂದೆ ಡಿ ವೈ ಎಸ್ ಪಿ ಗೀತಾ ಪಾಟೀಲ ಅವರು ಕುಂದರಗಿಯಲ್ಲಿ ಸಭೆ ನಡೆಸಿ, ಆರೋಪಿಗಳನ್ನು ಹಿಡಿಯುವುದಾಗಿ ಭರವಸೆ ನೀಡಿ ಹದಿನೈದು ದಿನಗಳು ಕಳೆದಿವೆ. ಆದರೆ ಇನ್ನೂ ಕಳ್ಳರ ಪತ್ತೆಯಾಗಿಲ್ಲ. ಮಂಚಿಕೇರಿ ಕಳ್ಳತನ ಮಾಡಿದ ವ್ಯಕ್ತಿ ಯಾರೆಂಬುದು ಎಲ್ಲರಿಗೂ ಗೊತ್ತಿದ್ದರೂ, ಕಳ್ಳನನ್ನು ಹಿಡಿಯದೇ ಇರುವುದು ವಿಚಿತ್ರವಾಗಿದೆ. ಅಧಿಕಾರಿಗಳು ದಕ್ಷರಾಗಿದ್ದರೂ, ನಮ್ಮ ಕಾರ್ಯ ಆಗದೇ ಇರುವುದೇಕೆ ಎಂಬ ಪ್ರಶ್ನೆ ಮೂಡುತ್ತಿದೆ.
ಕಿರವತ್ತಿ,ಕುಂದುರ್ಗಿ ಯಲ್ಲಾಪುರದಲ್ಲಿ ಸಿಸಿ ಕ್ಯಾಮರಾ ಇದ್ದರೂ ಕಳ್ಳತನ ಪತ್ತೆಯಾಗಿಲ್ಲ. ಗ್ರಾಮೀಣ ಭಾಗದ ಒಂಟಿ ಮನೆಗಳಿದ್ದು, ಜನ ಕಳ್ಳರ ಭಯದಲ್ಲಿ ಬದುಕುವಂತಾಗಿದೆ. ಮುಂದಿನ ಹತ್ತು ದಿವಸಗಳಲ್ಲಿ ಕಳ್ಳರನ್ನು ಹಿಡಿಯದೇ ಇದ್ದಲ್ಲಿ ಪೊಲೀಸ್ ಠಾಣೆಯ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.
ಒಕ್ಕೂಟದ ರಾಜ್ಯ ಸದಸ್ಯ ಗಣೇಶ ಹೆಗಡೆ
ಕುಂದರಗಿ ಮಾತನಾಡಿ, ಯಲ್ಲಾಪುರದಲ್ಲಿ ಪೊಲೀಸರು ಇದ್ದಾರೋ ಇಲ್ಲವೊ ಎಂಬುದೇ ತಿಳಿಯುತ್ತಿಲ್ಲ. ಅಕ್ರಮ ಚಟುವಟಿಕೆಗಳು ಇಡೀ ತಾಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಅಕ್ರಮ ಸರಾಯಿ, ಗಾಂಜಾ ಮಾರಾಟ ನಡೆಯುತ್ತಿದೆ. ಹಗಲಲ್ಲೂ ಕಳ್ಳತನ ಆಗುತ್ತಿದೆ. ಕಳ್ಳತನ ನಡೆದು ಮೂರ್ನಾಲ್ಕು ತಿಂಗಳು ಆದರೂ, ಕಳ್ಳರನ್ನು ಪತ್ತೆ ಮಾಡಿಲ್ಲ. ಕಳ್ಳತನದ ಆರೋಪಿಗಳ ಸಿಸಿಟಿವಿ ಪೂಟೇಜ್ ನೀಡಲಾಗಿದೆ. ವಾಹನದ ನಂಬರ್ ನೀಡಲಾಗಿದೆ. ಆದರೂ ಕಳ್ಳರನ್ನು ಹಿಡಿಯಲಾಗುತ್ತಿಲ್ಲ. ಪೊಲೀಸರು ತಮ್ಮ ಜವಬ್ದಾರಿ ಅರಿತು ಕೆಲಸ ಮಾಡಲಿ. ಹಲವೆಡೆ ಪ್ರತಿಷ್ಠಿತ ಗಣ್ಯರೇ ಅಕ್ರಮ ಚಟುವಟಿಕೆಗಳನ್ನು ನಡೆಸಿ ಮೆರೆಯುತ್ತಿದ್ದಾರೆ. ಪೊಲೀಸ್ ಇಲಾಖೆಯ ದಕ್ಷತೆಗೆ ಯಾರು ಕಡಿವಾಣ ಹಾಕುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಒಕ್ಕೂಟದ ಪ್ರಮುಖರಾದ ಸತ್ಯನಾರಾಯಣ ಹೆಗಡೆ, ಕೆಟಿ ಹೆಗಡೆ, ಸದಾಶಿವ ಚಿಕ್ಕೋತ್ತಿ,ಸುಬ್ಬಣ್ಣ ಉದ್ದಾಬೈಲ್,ವಿಶ್ವೇಶ್ವರ ಏಕಾನ್, ಸುನಂದಾ ಮರಾಠಿ, ಪ್ರಕಾಶ ಶಾಪೂರಕರ್ ಇದ್ದರು.







